ನಿರುದ್ಯೋಗಕ್ಕಿಂತ ಪಕೋಡ ಮಾರುವುದೇ ಉತ್ತಮ : ಅಮಿತ್ ಶಾ
ಹೊಸದಿಲ್ಲಿ,ಫೆ.5: ‘‘ನಿರುದ್ಯೋಗಕ್ಕಿಂತ ಪಕೋಡ ಮಾರುವುದೇ ಉತ್ತಮ ಕೆಲಸ. ಪಕೋಡ ಮಾರುವುದು ಕೀಳು ಕೆಲಸವಲ್ಲ. ಅದು ನಾಚಿಕೆ ಪಡುವಂತಹ ವಿಷಯವೂ ಅಲ್ಲ. ಪಕೋಡ ಮಾರುವವನ ಮಗ ಶ್ರೀಮಂತರಾಗಬಹುದು. ಪಕೋಡ ಮಾರುವವರನ್ನು ಭಿಕ್ಷುಕರಿಗೆ ಹೋಲಿಸುವುದು ಸರಿಯಲ್ಲ’’ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಜ್ಯಸಭೆಯಲ್ಲಿ ಹೇಳಿದ್ದಾರೆ.
‘‘ದೇಶದಲ್ಲಿ ನಿರುದ್ಯೋಗ ಸಮಸ್ಯೆ ಸೃಷ್ಟಿಯಾಗಿದ್ದು ನಿಜ. ಇದು ನಮ್ಮ ಅಧಿಕಾರವಧಿಯಲ್ಲಿ ಸೃಷ್ಟಿಯಾಗಿದ್ದಲ್ಲ್ಲ. ನಿರುದ್ಯೋಗ ನಿವಾರಣೆಗೆ ಕೇಂದ್ರ ಸರಕಾರ ಮುದ್ರಾಯೋಜನೆಯಡಿ ಸಾಲಸೌಲಭ್ಯ ನೀಡುತ್ತಿದೆ’’ ಎಂದು ಶಾ ಹೇಳಿದ್ದಾರೆ.
ಪಕೋಡಾ ಮಾರುವುದು ಒಂದು ಉದ್ಯೋಗ ಎಂದು ಇತ್ತೀಚೆಗೆ ಟಿವಿ ಚಾನಲ್ ಸಂದರ್ಶನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದರು. ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗಿಗಳ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದ್ದರು. ಪ್ರಧಾನಿ ಮೋದಿ ಹೇಳಿಕೆಗೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಡಿಸಿದ್ದು, ದೇಶದೆಲ್ಲೆಡೆ ನಿರುದ್ಯೋಗ ಯುವಕರು ಪಕೋಡ ಮಾರಿ ಮೋದಿಯ ಹೇಳಿಕೆಯನ್ನು ಖಂಡಿಸುತ್ತಿದ್ದಾರೆ.