ಡೆಹ್ರಾಡೂನ್ ನಕಲಿ ಎನ್ಕೌಂಟರ್ ಪ್ರಕರಣ: 7 ಪೊಲೀಸರಿಗೆ ಜೀವಾವಧಿ ಶಿಕ್ಷೆ, 10 ಆರೋಪಿಗಳ ಖುಲಾಸೆ
ಹೊಸದಿಲ್ಲಿ,ಫೆ.6: 2009ರಲ್ಲಿ ಡೆಹ್ರಾಡೂನ್ನಲ್ಲಿ ನಕಲಿ ಎನ್ಕೌಂಟರ್ನಲ್ಲಿ 22ರ ಹರೆಯದ ಎಂಬಿಎ ವಿದ್ಯಾರ್ಥಿಯ ಹತ್ಯೆಗಾಗಿ ಈಗಾಗಲೇ ಸೇವೆಯಿಂದ ಅಮಾನತು ಗೊಂಡಿರುವ ಉತ್ತರಾಖಂಡದ ಏಳು ಪೊಲೀಸರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ದಿಲ್ಲಿ ಉಚ್ಚ ನ್ಯಾಯಾಲಯವು ಮಂಗಳವಾರ ಆದೇಶಿಸಿದೆ. ಆದರೆ ಇತರ ಹತ್ತು ಅಮಾನತುಗೊಂಡಿರುವ ಪೊಲೀಸರ ದೋಷನಿರ್ಣಯ ಮತ್ತು ಅವರಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ರದ್ದುಗೊಳಿಸಿದೆ.
2009,ಜುಲೈ 3ರಂದು ವಿದ್ಯಾರ್ಥಿ ರಣಬೀರ್ ಸಿಂಗ್ನನ್ನು ಹತ್ಯೆಗೈದಿದ್ದ ಏಳು ಪೊಲೀಸರಿಗೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯದ 2014, ಜೂನ್ 9ರ ತೀರ್ಪನ್ನು ನ್ಯಾಯಮೂರ್ತಿಗಳಾದ ಎಸ್.ಮುರಳೀಧರ ಮತ್ತು ಐ.ಎಸ್.ಮೆಹ್ತಾ ಅವರ ಪೀಠವು ಎತ್ತಿ ಹಿಡಿಯಿತು.
ಘಾಝಿಯಾಬಾದ್ ನಿವಾಸಿಯಾಗಿದ್ದ ಸಿಂಗ್ ಇತರ ಇಬ್ಬರೊಂದಿಗೆ ದರೋಡೆ ನಡೆಸಲು ಡೆಹ್ರಾಡೂನ್ಗೆ ತೆರಳಿದ್ದ ಮತ್ತು ತಮ್ಮ ಪೈಕಿ ಓರ್ವನ ಸರ್ವಿಸ್ ರಿವಾಲ್ವರ್ನ್ನು ಕಿತ್ತುಕೊಂಡಿದ್ದ ಎಂದು ಪೊಲೀಸರು ತಮ್ಮ ಮೇಲ್ಮನವಿಯಲ್ಲಿ ಆರೋಪಿಸಿದ್ದರು. ಆಗಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಭೇಟಿಯ ಹಿನ್ನೆಲೆಯಲ್ಲಿ ಈ ಎಲ್ಲ ಪೊಲೀಸರನ್ನು ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
ಸಿಂಗ್ ಕೆಲಸಕ್ಕೆ ಸೇರಲು ಡೆಹ್ರಾಡೂನ್ಗೆ ತೆರಳಿದ್ದ ಮತ್ತು ಪೊಲೀಸರದು ಕಟ್ಟುಕತೆಯಾಗಿದೆ ಎಂದು ಸಿಬಿಐ ನ್ಯಾಯಾಲಯದಲ್ಲಿ ವಾದಿಸಿತ್ತು.