ಬಿಜೆಪಿಗಾಗಿ ಶ್ರಮಿಸಿದ ಅಡ್ವಾಣಿಯನ್ನು ಮೂಲೆಗುಂಪು ಮಾಡಿದ ಪ್ರಧಾನಿ ಮೋದಿ : ಅಂಬರೀಶ್
ಬಳ್ಳಾರಿ (ಹೊಸಪೇಟೆ),ಫೆ10: ಬಿಜೆಪಿ ಪಕ್ಷಕ್ಕಾಗಿ ಶ್ರಮಿಸಿದ ಎಲ್.ಕೆ.ಅಡ್ವಾಣಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಮೂಲೆಗುಂಪು ಮಾಡಿದರು.ಆದರೆ, ನೆಹರೂರವರು ವಲ್ಲಭಭಾಯ್ ಪಟೇಲ್ ರಿಗೆ ಅನ್ಯಾಯ ಮಾಡಿದರು ಎಂದು ಹೇಳುವ ಮೋದಿ ಮೊದಲು ಕನ್ನಡಿಯಲ್ಲಿ ಒಮ್ಮೆ ತಮ್ಮ ಮುಖ ನೋಡಿಕೊಳ್ಳಲಿ ಎಂದು ಹಿರಿಯ ನಟ, ಕಾಂಗ್ರೆಸ್ ಮುಖಂಡ ಅಂಬರೀಶ್ ಹೇಳಿದ್ದಾರೆ.
ಶನಿವಾರ ಬಳ್ಳಾರಿಯ ಹೊಸಪೇಟೆಯಲ್ಲಿ ಕೆಪಿಸಿಸಿ ಆಯೋಜಿದ್ದ ಜನಾಶೀರ್ವಾದ ಯಾತ್ರೆಗೆ ಚಾಲನೆ ಹಾಗೂ ಬಿಜೆಪಿ ಶಾಸಕ ಆನಂದ್ ಸಿಂಗ್, ನಾಗೇಂದ್ರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಭಾರತದಲ್ಲಿರೋ ನಂಬರ್ 1 ಪಕ್ಷ ಎಂದರೆ ಕಾಂಗ್ರೆಸ್ ಪಕ್ಷ ಎಂದ ಅವರು, ಈ ಪಕ್ಷ ಕಟ್ಟಿ ಬೆಳೆಸಲು ಬರೀ ಹಣ ಮಾತ್ರವಲ್ಲದೆ, ರಕ್ತವನ್ನೂ ಕೊಟ್ಟಿದ್ದಾರೆ ಎಂದು ಹೇಳಿದರು.
ಈ ಹಿಂದೆ ಬಿಜೆಪಿ ಅವರು ಆಧಾರ್ ಕಾರ್ಡ್, ವಿದೇಶಿ ಬಂಡವಾಳ ಹೂಡಿಕೆ, ಜಿಎಸ್ ಟಿ ಬೇಡ ಎಂದು ತೀವ್ರ ವಿರೋಧ ವ್ಯಕ್ತಪಡಿಸಿದರು. ಇವತ್ತು ಇವೆಲ್ಲವನ್ನು ನಮ್ಮ ಮೇಲೆ ತಂದು ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.