ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ರಾಷ್ಟ್ರಪತಿ ಆಡಳಿತ : ಹಾರ್ದಿಕ್ ಭವಿಷ್ಯ
ಕೊಲ್ಕತ್ತಾ,ಫೆ.11: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ನರೇಂದ್ರ ಮೋದಿ ಅಧಿಕಾರಕ್ಕೆ ಬಂದರೆ ದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಖಚಿತ ಎಂದು ಪಾಟಿದಾರ ಮುಖಂಡ ಹಾರ್ದಿಕ್ ಪಟೇಲ್ ಭವಿಷ್ಯ ನುಡಿದಿದ್ದಾರೆ.
ಬಂಗಾಳಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ದೇಶವನ್ನು ವಿಭಜಿಸಲು ಹೊರಟಿರುವ ಬಿಜೆಪಿ ವಿರುದ್ಧ ಎಲ್ಲ ವಿರೋಧ ಪಕ್ಷಗಳೂ ಒಗ್ಗೂಡಬೇಕು" ಎಂದು ಕರೆ ನೀಡಿದ್ದಾರೆ. ವಿರೋಧ ಪಕ್ಷಗಳ ಬಗ್ಗೆ ಸಂಸತ್ತಿನಲ್ಲಿ ಪ್ರಧಾನಿ ಹೇಳಿಕೆ ನೀಡಿರುವುದನ್ನು ಕೂಡಾ ಹಾರ್ದಿಕ್ ಟೀಕಿಸಿದ್ದಾರೆ.
"ಶಿಕ್ಷಣ, ಆರೋಗ್ಯ, ಉದ್ಯೋಗ, ಕೃಷಿ, ಭದ್ರತೆ ಅಥವಾ ಸುರಕ್ಷತೆ ಬಗ್ಗೆ ಮಾತನಾಡುವ ಪ್ರಧಾನಿ ನಮಗೆ ಬೇಕು; ವಿರೋಧ ಪಕ್ಷಗಳನ್ನು ಟೀಕಿಸುವ ಸಲುವಾಗಿಯೇ ಸಂಸತ್ತಿನಲ್ಲಿ 90 ನಿಮಿಷ ಕಳೆಯುವ ಪ್ರಧಾನಿ ನಮಗೆ ಬೇಕಿಲ್ಲ" ಎಂದು ವ್ಯಂಗ್ಯವಾಡಿದರು.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸರಳತೆಯನ್ನು ಹೊಗಳಿದ ಪಟೇಲ್, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ ಪರ ಪ್ರಚಾರ ಮಾಡುವುದಾಗಿ ಘೋಷಿಸಿದರು. ಇದಕ್ಕೂ ಮುನ್ನ ಮಮತಾ ಬ್ಯಾನರ್ಜಿಯವರನ್ನು ಭೇಟಿ ಮಾಡಿದ ವೇಳೆ ಅವರು ತಮ್ಮನ್ನು ಪಕ್ಷಕ್ಕೆ ಆಹ್ವಾನಿಸಿದ್ದಾಗಿ ಪಾಟಿದಾರ ಆಂದೋಲನ ಸಮಿತಿ ಸಂಚಾಲಕ ವಿವರಿಸಿದರು.