ರೈಲು ಮಾರ್ಗದ ಬಗ್ಗೆ ಆತಂಕ ಬೇಡ : ಶಾಸಕ ಅಪ್ಪಚ್ಚು ರಂಜನ್

Update: 2018-02-11 11:49 GMT

ಮಡಿಕೇರಿ,ಫೆ.11:ಕೊಡಗಿನಲ್ಲಿ ಖಂಡಿತಾ ರೈಲು ಮಾರ್ಗದ ಯೋಜನೆ ಜಾರಿಯಾಗುವುದಿಲ್ಲ, ಈ ಬಗ್ಗೆ ಜನತೆಗೆ ಯಾವುದೇ ಆತಂಕ ಬೇಡ ಎಂದು ಹೇಳಿರುವ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಕುಶಾಲನಗರದೊಳಕ್ಕೂ ಪ್ರವೇಶಿಸದ ರೈಲು ಮಾರ್ಗಕ್ಕೆ ರಾಣಿಗೇಟ್ ನಲ್ಲಿ ಅಂತಿಮ ನಿಲ್ದಾಣ ನಿರ್ಮಿಸಲಾಗುತ್ತದೆ ಎಂದು ಹೇಳಿದ್ದಾರೆ.

ಕೊಡಗು ಜಿಲ್ಲಾ ಬಿಜೆಪಿಯಿಂದ ಚುನಾವಣಾ ಪ್ರಣಾಳಿಕೆ ರೂಪಿಸುವ ನಿಟ್ಟಿನಲ್ಲಿ ಜರುಗಿದ ಸಭೆಯಲ್ಲಿ ಮಾತನಾಡಿದ ಎಂ.ಪಿ.ಅಪ್ಪಚ್ಚುರಂಜನ್, ರೈಲು ಯೋಜನೆ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಯಾಗುತ್ತಿದೆ. ಕೊಡಗಿನ ಪರಿಸರ ರಕ್ಷಣೆ ಬಿಜೆಪಿಯ ಆದ್ಯತೆಯೂ ಆಗಿದೆ. ಹೀಗಿರುವಾಗ ಕೊಡಗಿಗೆ ಖಂಡಿತಾ ರೈಲು ಯೋಜನೆ ಬರಲು ಬಿಡಲಾರೆವು ಎಂದು ಸ್ಪಷ್ಟಪಡಿಸಿದರು. ಉದ್ದೇಶಿತ ಮೈಸೂರು - ಕುಶಾಲನಗರ ರೈಲು ಮಾಗ9ದ ಯೋಜನೆಯಡಿ ಕುಶಾಲನಗರ ಗಡಿಗ್ರಾಮವಾದ ರಾಣಿಗೇಟ್ ನಲ್ಲಿಯೇ ಕೊನೇ ರೇಲು ನಿಲ್ದಾಣ ಸ್ಥಾಪಿಸಲಾಗುತ್ತದೆ. ರಾಣಿಗೇಟ್ ನಿಂದ ಗುಡ್ಡೆಹೊಸೂರುವರೆಗೆ ಸುಸಜ್ಜಿತ ಸೇತುವೆ ನಿರ್ಮಿಸಿ ಪ್ರಯಾಣಿಕರ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ ಎಂದೂ ರಂಜನ್ ಹೇಳಿದರು. 

ಕೊಡಗಿಗೆ ವಿಮಾನ ನಿಲ್ದಾಣ ಆಗಬೇಕೆಂಬ ಚಿಂತನೆಯೂ ತನಗಿದೆ ಎಂದು ಹೇಳಿದ ಶಾಸಕ ರಂಜನ್, ಪ್ರವಾಸಿಗರಿಂದಾಗಿಯೇ ಕೊಡಗಿನ ಬಹುತೇಕ ಜನರ ಆರ್ಥಿಕ ಸ್ಥಿತಿ ಸುಧಾರಿಸಿದೆ. ಹೀಗಿರುವಾಗ ಕೊಡಗಿಗೆ ಬರುವ ಪ್ರವಾಸಿಗರಿಗೆ ಉತ್ತಮ ಗುಣಮಟ್ಟದ ಸೌಲಭ್ಯ ನೀಡುವುದು ಬಿಜೆಪಿಯ ಗುರಿಯಾಗಲಿದೆ. ಹಾಗೇ ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೂ ಆದ್ಯತೆ ನೀಡಲಾಗುತ್ತದೆ. ಕೊಡಗಿನ ಧಾರ್ಮಿಕ ಕ್ಷೇತ್ರಗಳನ್ನು ಪ್ರವಾಸೀ ತಾಣಗಳಿಂದ ಹೊರತಾಗಿಸಿ ಕಟ್ಟುನಿಟ್ಟಿನ ಶ್ರದ್ಧೆ, ಭಕ್ತಿಯ ಮನೋಧರ್ಮಕ್ಕೆ ಆದ್ಯತೆ ಕಲ್ಪಿಸಲಾಗುತ್ತದೆ ಎಂದೂ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದರು. 

ಜಿಲ್ಲಾ ಬಿಜೆಪಿಯ ಚುನಾವಣಾ ಪ್ರಣಾಳಿಕೆ ಸಮಿತಿ ಸಂಚಾಲಕ ಬಿ.ಡಿ.ಮಂಜುನಾಥ್ , ಕೊಡಗಿನ ಸಾರ್ವಜನಿಕ ಪ್ರಮುಖರ, ಸಂಘ ಸಂಸ್ಥೆಗಳ ಪ್ರತಿನಿಧಿಗಳಿಂದ ಅಭಿಪ್ರಾಯ ಕ್ರೋಡೀಕರಿಸಿ ಬಿಜೆಪಿಯ ಕೇಂದ್ರ ಸಮಿತಿಗೆ ಅಭಿಪ್ರಾಯಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಲಾಗುತ್ತದೆ. ಈ ಬಳಿಕ ಜಿಲ್ಲೆ ಮತ್ತು ರಾಜ್ಯ ಮಟ್ಟದ ಪ್ರಣಾಳಿಕೆಯನ್ನು ಬಿಜೆಪಿಯ ವರಿಷ್ಟ ಮಂಡಳಿ ಸಿದ್ದಗೊಳಿಸಲಿದೆ. ಕೊಡಗಿನ ಜನತೆಯ ಹಿತಾಸಕ್ತಿಗೆ ಆದ್ಯತೆ ನೀಡಿ ಕೊಡಗಿನ ಜನರ ಭಾವನೆಗಳಿಗೆ ಚ್ಯುತಿಬಾರದಂತೆ ಪ್ರಣಾಳಿಕೆಯನ್ನು  ರಾಜ್ಯ  ಚುನಾವಣಾ ಪ್ರಣಾಳಿಕೆಯ ಉಸ್ತುವಾರಿ ಮುರಳೀಧರ್ ನೇತೃತ್ವದಲ್ಲಿ ತಯಾರಿಸಲಾಗುತ್ತದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್, ಉಪಾಧ್ಯಕ್ಷರಾದ ಮೋಂತಿ ಗಣೇಶ್, ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ತಳೂರು ಕಿಶೋರ್ ಕುಮಾರ್, ಪ್ರಣಾಳಿಕಾ ಸಮಿತಿಯ ರಾಜ್ಯ ಸಂಚಾಲಕ ಗಿರಿಧರ್, ಮಡಿಕೇರಿ ನಗರ ಅಧ್ಯಕ್ಷ ಮಹೇಶ್ ಜೈನಿ ಹಾಜರಿದ್ದರು. 

ಮಡಿಕೇರಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಅನಿತಾ ಪೂವಯ್ಯ,  ಕೊಡಗು ಕಾಫಿ ಸಹಕಾರ ಸಂಘದ ಅಧ್ಯಕ್ಷ ಎಂ.ಬಿ. ದೇವಯ್ಯ, ಮಡಿಕೇರಿ ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಜಿ.ಪಂ. ಸದಸ್ಯ ಮುರಳಿಕರುಂಬಮ್ಮಯ್ಯ, ರಮೇಶ್ ಮುದ್ದಯ್ಯ, ಸುಕುಮಾರ್, ಡಾ.ಮೋಹನ್ ಅಪ್ಪಾಜಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News