ರಾಯಚೂರಿನ ರಸ್ತೆ ಬದಿ ಬಜ್ಜಿ ಸವಿದ ರಾಹುಲ್ ಗಾಂಧಿ
ರಾಯಚೂರು, ಫೆ.12: ಜನಾರ್ಶೀವಾದ ಯಾತ್ರೆಯ ಮೂರನೇ ದಿನವಾದ ಸೋಮವಾರ ರಾಯಚೂರಿನಲ್ಲಿ ಭರ್ಜರಿ ರೋಡ್ ಶೋ ನಡೆಸಿದ ರಾಹುಲ್ ಗಾಂಧಿ ಅವರಿಗೆ ಹೂಮಳೆ ಸುರಿಸಿ ಸ್ವಾಗತ ನೀಡಲಾಯಿತು.
ಇದೇ ವೇಳೆ ರಾಯಚೂರಿನ ಕಲ್ಮಲದಲ್ಲಿ ರಸ್ತೆ ಬದಿಯ ಡಾಬಾವೊಂದಕ್ಕೆ ತೆರಳಿದ ರಾಹುಲ್ ಗಾಂಧಿ ಬಿಸಿ ಬಿಸಿ ಮೆಣಸಿನ ಕಾಯಿ ಬೋಂಡ, ಬಜ್ಜಿ, ಪಕೋಡಾ ತಿಂದು, ಚಹಾ ಕುಡಿದರು. ರಾಹುಲ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಸಾಥ್ ನೀಡಿದರು. ಬಜ್ಜಿ ತಿಂದು ತೃಪ್ತಿವ್ಯಕ್ತಪಡಿಸಿದ ರಾಹುಲ್, ದಿನಕ್ಕೆ ಎಷ್ಟು ವ್ಯಾಪಾರವಾಗುತ್ತದೆ ಎಂದು ಡಾಬಾ ಮಾಲಿಕರನ್ನು ಕೇಳಿದರು. 2000ರೂ. ನೋಟನ್ನು ನೀಡಿ ನಿರ್ಗಮಿಸಿದರು.
ಇದಕ್ಕೆ ಮೊದಲು ರಾಹುಲ್ ರಾಯಚೂರಿನ ಶಂಶಾಲಂ ದರ್ಗಾಕ್ಕೆ ದಿಢೀರ್ ಭೇಟಿ ನೀಡಿದರು. ರೋಡ್ ಶೋ ವೇಳೆ ಅಭಿಮಾನಿಗಳು ತಾಮ್ರದ ಗದೆಯೊಂದನ್ನು ಉಡುಗೊರೆಯಾಗಿ ನೀಡಿ ಸಂಭ್ರಮಿಸಿದರು.
‘‘ಚೀನಾ ದೇಶದ ಜೊತೆ ನಮಗೆ ಹಲವು ಕ್ಷೇತ್ರಗಳಲ್ಲಿ ಪೈಪೋಟಿಯಿದೆ. ಉದ್ಯೋಗ ಸೃಷ್ಟಿಯಲ್ಲಿ ಚೀನಾ ನಮಗಿಂತ ಮುಂದಿದೆ’’ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.