ಗಂಗಾವತಿ: ಬಿಜೆಪಿಯಲ್ಲಿ ನಾನು ಕೂಡಾ ಪ್ರಬಲ ಟಕೆಟ್ ಆಕಾಂಕ್ಷಿ; ಹೆಚ್.ಆರ್.ಚನ್ನಕೇಶವ
ಗಂಗಾವತಿ,ಫೆ.18: ಬಿಜೆಪಿ ಪಕ್ಷದಲ್ಲಿ ಹಲವಾರು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಅದರಲ್ಲಿ ನಾನೂ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ಬಿಜೆಪಿ ರಾಜ್ಯ ಯುವಮುಖಂಡ ಹೆಚ್. ಆರ್. ಚನ್ನಕೇಶವ ಹೇಳಿದರು.
ಅವರು ನಗರದ ಆನೆಗುಂದಿ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕ್ಷೇತ್ರದಾದ್ಯಂತ ಈಗಾಗಲೇ ಜನರ ಮನೆ ಮನೆ ಬಾಗಿಲಿಗೆ ತೆರಳಿ ಕೇಂದ್ರದ ಸಾಧನೆಗಳನ್ನು ತಿಳಿಸುವುದರೊಂದಿಗೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದ್ದು, ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ನಮ್ಮ ತಂದೆಯ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ ಜನರ ಮಧ್ಯೆ ಇರಲು ಬಯಸಿದ್ದೇನೆ. ಜನಸೇವೆ ಮಾಡುವ ಅವಕಾಶ ಕೊಡಿ ಎಂದು ಕೋರಿದರು.
ಜೆಡಿಎಸ್ ಸೇರ್ಪಡೆ ಕುರಿತು ಪ್ರಶ್ನಿಸಿದ ಪತ್ರಕರ್ತರಿಗೆ ಉತ್ತರಿಸಿದ ಅವರು, ಇದರಲ್ಲಿ ಯಾವುದೇ ಹುರುಳಿಲ್ಲ. ಕಳೆದ 5 ವರ್ಷಗಳಿಂದ ಬಿಜೆಪಿಯಲ್ಲಿದ್ದೇನೆ. ಬಿಜೆಪಿ ಟಿಕೇಟಿಗೆ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಟಿಕೇಟ್ ಸಿಗದಿದ್ದಲ್ಲಿ ಪಕ್ಷಕ್ಕಾಗಿ ದುಡಿಯುತ್ತೇನೆ. ಹಿಂದುಳಿದವರು, ಅಲ್ಪಸಂಖ್ಯಾತರ, ಶೋಷಿತರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ ಎಂದರು.
ಜೆಡಿಎಸ್ನಿಂದ ಶ್ರೀನಾಥರಿಗೆ ಟಿಕೇಟ್ ನೀಡಿದರೆ, ಬಿಜೆಪಿಯಿಂದ ನೀವು ಸ್ಪರ್ಧಿಸುವಿರಾ ಎಂದಾಗ, ಟಿಕೇಟ್ ಸಿಕ್ಕರೆ ನಿಲ್ಲುವೆ, ಇದರಲ್ಲಿ ಯಾವುದೇ ಸಂದೇಹವಿಲ್ಲ. ರಾಜ್ಯ ಮತ್ತು ಜಿಲ್ಲಾ ಎಲ್ಲಾ ಮುಖಂಡರು ಒಂದಾಗಿ ಕೆಲಸ ಮಾಡ್ತೀವಿ. ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯಿಲ್ಲ ಎಂದರು.
ಶಾಸಕ ಇಕ್ಬಾಲ್ ಅನ್ಸಾರಿಯವರು ಈಗಿನ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ 625 ಕೋಟಿ ರೂ. ತಂದು ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳುತ್ತಿದ್ದು, ಎಲ್ಲೆಲ್ಲಿ ಮಾಡಿದ್ದಾರೆಂಬುದನ್ನು ತಿಳಿಸಬೇಕೆಂದು ಒತ್ತಾಯಿಸಿದರು..