ಬ್ಯಾಂಕ್ಗಳ ನಷ್ಟ ಭರ್ತಿ ಮಾಡಲು ಪಿಎನ್ಬಿಗೆ ಸೂಚನೆ?
ಹೊಸದಿಲ್ಲಿ, ಫೆ.23: ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಪ್ರಧಾನ ಆರೋಪಿಗಳಾಗಿರುವ ಪಿಎನ್ಬಿ ಬ್ಯಾಂಕ್ ವಂಚನೆ ಹಗರಣದಲ್ಲಿ ಇತರ ಬ್ಯಾಂಕ್ಗಳಿಗೆ ಉಂಟಾಗಿರುವ ನಷ್ಟವನ್ನು ಭರ್ತಿ ಮಾಡಿಕೊಡುವಂತೆ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ಬಿ)ಗೆ ಸೂಚಿಸಲು ಸರಕಾರ ಯೋಚಿಸುತ್ತಿದೆ ಎಂದು ಅಜ್ಞಾತವಾಗಿರಲು ಬಯಸಿರುವ ಅಧಿಕಾರಿಯೋರ್ವರು ತಿಳಿಸಿರುವುದಾಗಿ ವರದಿಯಾಗಿದೆ.
ಪಿಎನ್ಬಿ ಬ್ಯಾಂಕ್ನ ಅಧಿಕಾರಿಯೋರ್ವರ ನೆರವಿನಿಂದ ನಕಲಿ ಸಾಲ ಖಾತರಿ ಪತ್ರ ತಯಾರಿಸಿದ್ದ ನೀರವ್ ಮೋದಿ, ಅದನ್ನು ವಿದೇಶದಲ್ಲಿರುವ ಬ್ಯಾಂಕ್ ಶಾಖೆಗಳಿಂದ ಸಾಲ ಪಡೆಯಲು ಬಳಸುತ್ತಿದ್ದರು ಎಂಬ ಆರೋಪವಿದೆ. ಇದರಿಂದ ಅಲಹಾಬಾದ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಯುಕೋ ಬ್ಯಾಂಕ್ಗಳಿಗೆ ಭಾರೀ ನಷ್ಟವಾಗಿದೆ. ಈ ನಷ್ಟವನ್ನು ಪಿಎನ್ಬಿ ಭರ್ತಿ ಮಾಡಿಕೊಡಬೇಕೆಂದು ಸೂಚಿಸಲು ಸರಕಾರ ಯೋಚಿಸುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಮಧ್ಯೆ, ತಮ್ಮ ವ್ಯವಸ್ಥೆಯಲ್ಲಿ ಯಾವುದಾದರೂ ಲೋಪಗಳಿವೆಯೇ ಎಂಬುದನ್ನು ಪುನರ್ಪರಿಶೀಲಿಸಬೇಕೆಂದು ವಿತ್ತ ಸಚಿವಾಲಯ ಎಲ್ಲಾ ಸರಕಾರಿ ಅಧೀನದ ಬ್ಯಾಂಕ್ಗಳಿಗೆ ಸೂಚಿಸಿದೆ. ಅಲ್ಲದೆ ತಮ್ಮ ವಿದೇಶದ ಕಚೇರಿಯ ಲೆಕ್ಕಪತ್ರಗಳನ್ನು ಪರಿಶೀಲಿಸಿ ಯಾವುದಾದರೂ ಅವ್ಯವಹಾರ ನಡೆದಿದೆಯೇ ಎಂಬುದನ್ನು ಗಮನಿಸುವಂತೆ ಬ್ಯಾಂಕ್ಗಳಿಗೆ ಸೂಚಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.