ಶಾಲಾ ಕಟ್ಟಡಕ್ಕೆ ನುಗ್ಗಿದ ಕಾರು: 9 ಮಕ್ಕಳು ಮೃತ್ಯು
ಮುಝಫರ್ಪುರ, ಫೆ.24: ನಿಯಂತ್ರಣ ಕಳೆದುಕೊಂಡ ಕಾರೊಂದು ಶಾಲಾ ಕಟ್ಟಡಕ್ಕೆ ಢಿಕ್ಕಿ ಹೊಡೆದ ಪರಿಣಾಮ 9 ಮಕ್ಕಳು ಸ್ಥಳದಲ್ಲೇ ಮೃತಪಟ್ಟು 20 ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಬಿಹಾರದ ಮುಝಫರ್ಪುರದಲ್ಲಿ ಶನಿವಾರ ಸಂಭವಿಸಿದೆ. ಶನಿವಾರದಂದು ಶಾಲೆ ಮುಗಿದು ಮಕ್ಕಳು ಮನೆಗೆ ತೆರಳಲು ಸಿದ್ಧರಾಗುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮೀನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡ ಮಕ್ಕಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಕುಮಾರ್ ತಿಳಿಸಿದ್ದಾರೆ. ಮೃತ ಮಕ್ಕಳ ಕುಟುಂಬಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್ ತಲಾ ನಾಲ್ಕು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಆರ್ಜೆಡಿ ಶಾಸಕ ಮುನ್ನಾ ಯಾದವ್, ಕಾರು ಚಾಲಕ ಖಂಡಿತವಾಗಿಯೂ ಮದ್ಯಪಾನ ಮಾಡಿರಬಹುದು. ಸರಕಾರವು ಮದ್ಯಪಾನದ ಮೇಲೆ ನಿಷೇಧ ಹೇರಿದ್ದೇವೆ ಎಂದು ಎಷ್ಟು ಹೇಳಿದರೂ ರಾಜ್ಯದಲ್ಲಿ ಮದ್ಯ ಸೇವನೆಯ ಪ್ರಮಾಣ ಕಡಿಮೆಯಾಗಿಲ್ಲ ಎಂದು ಆರೋಪಿಸಿದ್ದಾರೆ.