ಸುಳ್ಳು ಹೇಳಿ ಜನರಿಗೆ ಮೋಸ ಮಾಡುತ್ತಿರುವ ಬಿಎಸ್ವೈ: ಮಧು ಬಂಗಾರಪ್ಪ
ಸೊರಬ, ಫೆ.25: ಡಿಜಿಟಲ್ ಬ್ಯಾನರ್ನಲ್ಲಿ ಅಭಿವೃದ್ಧಿ ಹೊಳೆ ಹರಿಸುವ ಬಿ.ಎಸ್.ಯಡಿಯೂರಪ್ಪ ಅಬ್ಬರದ ಪ್ರಚಾರ ಮಾಡಿ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಶಾಸಕ ಮಧು ಬಂಗಾರಪ್ಪ ಟೀಕಿಸಿದ್ದಾರೆ.
ತಾಲ್ಲೂಕಿನ ಕಪ್ಪಗಳಲೆ ಗ್ರಾಮದ ರಸ್ತೆ ಡಾಂಬರೀಕರಣಕ್ಕೆ ರವಿವಾರ ಗುದ್ದಲಿ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿ, ಜನಪ್ರತಿನಿಧಿಗಳು ಅಭಿವೃದ್ಧಿ ಕಾರ್ಯಗಳಲ್ಲಿ ಜನರಿಗೆ ಸುಳ್ಳು ಹೇಳಿ ಮೋಸ ಮಾಡಿದರೆ ಮತ್ತೆ ಚುನಾವಣೆಯಲ್ಲಿ ಮತ ಕೇಳುವ ನೈತಿಕತೆ ಕಳೆದುಕೊಳ್ಳಲಿದ್ದಾರೆ ಎಂದರು.
ಅಧಿಕಾರದಲ್ಲಿದ್ದಾಗ ಯಡಿಯೂರಪ್ಪ ಯಾವುದೇ ಅಭಿವೃದ್ಧಿ ಮಾಡದೆ ಚುನಾವಣೆ ಸಮೀಪಿಸುತ್ತಿದ್ದಂತೆ ಕೇಂದ್ರ ಮಂತ್ರಿಗಳನ್ನು ಆಹ್ವಾನಿಸಿ ಶಂಕುಸ್ಥಾಪನೆಯ ನಾಟಕವಾಡುತ್ತಿದ್ದಾರೆ. ಈ ಹಿಂದೆ ತಾಲೂಕಿನ ಸಾಧುವಲ್ಲದ ದಂಡಾವತಿ ಯೋಜನೆಯಿಂದ ಜನರನ್ನು ಮುಳುಗಿಸಿಸಲು ಹೊರಟಿದ್ದರು. ಕಾಂಗ್ರೆಸ್ನಲ್ಲಿದ್ದಾಗ ಯೋಜನೆ ವಿರೋಧಿಸುತ್ತಿದ್ದ ಕುಮಾರ್ ಬಂಗಾರಪ್ಪ ರಾಜಕೀಯ ಅಸ್ತಿತ್ವಕ್ಕಾಗಿ ಯಡಿಯೂರಪ್ಪಅವರ ಕಾಲು ಹಿಡಿಯಲು ಹೊರಟಿರುವುದು ಹಾಸ್ಯಾಸ್ಪದ ಎಂದರು.
ತಾಲೂಕಿಗೆ ಸರಕಾರದಿಂದ ವಿವಿಧ ಯೋಜನೆಗಳಿಗೆ ಬಿಡುಗಡೆಯಾದ ಅನುದಾನಗಳನ್ನು ದುರುಪಯೋಗವಾಗದಂತೆ ನೋಡಿಕೊಂಡಿದ್ದೇನೆ. ಕುಡಿಯುವ ನೀರಿನ ಸಮಸ್ಯೆಯಿರುವ ಗ್ರಾಮಗಳಲ್ಲಿ ಕೊಳವೆ ಬಾವಿ ಕೊರೆಸುವಾಗ ಕಂಪೆನಿಯವರು ನೀರು ಬರುವುದಿಲ್ಲ ಎಂದು ಗ್ರಾಮಸ್ಥರಿಗೆ ಸುಳ್ಳು ಹೇಳಿ ಅರ್ಧಕ್ಕೆ ಕೇಸಿಂಗ್ ಪೈಪ್ ತೆಗೆದಿದ್ದಾರೆ. ಇಂತಹ ಕಂಪೆನಿಗಳಿಗೆ ಹಣ ತಡೆ ಹಿಡಿಯಲಾಗಿದೆ ಎಂದರು.
ಹೆಗ್ಗೋಡು ಗ್ರಾಪಂಅಧ್ಯಕ್ಷ ಗುರುಬಸಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮಮತಾ ಪರಶುರಾಮ್, ಜಿಪಂ ಸದಸ್ಯೆ ತಾರಾ ಶಿವಾನಂದಪ್ಪ, ಎಚ್.ಗಣಪತಿ, ಎಂ.ಡಿ.ಶೇಖರ್, ಲಕ್ಷ್ಮಣಪ್ಪ, ಪ್ರಭಾಕರ್, ಜಗದೀಶ್ ಕುಪ್ಪೆ, ರವಿಕುಮಾರ್, ಪರಶುರಾಮಪ್ಪ ಮತ್ತಿತರರಿದ್ದರು.