ಮೈಸೂರು: ಮಾ. 4-5 ರಂದು ವಿಭಾಗೀಯ ಮಟ್ಟದ ಬೃಹತ್ ಉದ್ಯೋಗ ಮೇಳ - ಶಾಸಕ ಎಂ.ಕೆ.ಸೋಮಶೇಖರ್
ಮೈಸೂರು,ಮಾ.1: ಕಾರ್ಮಿಕ ಇಲಾಖೆ, ಉದ್ಯೋಗ ತರಬೇತಿ ಇಲಾಖೆ ಜಿಲ್ಲಾಡಳಿತ ಮತ್ತು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಇವರ ಸಹಯೋಗದೊಂದಿಗೆ ವಿಭಾಗೀಯ ಮಟ್ಟದ ಕೌಶಲ್ಯ ಹಾಗೂ ಬೃಹತ್ ಉದ್ಯೋಗ ಮೇಳವನ್ನು ಮಾರ್ಚ್ 4-5ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಶಾಸಕ ಸೋಮಶೇಖರ್ ತಿಳಿಸಿದರು.
ಮಹಾರಾಜ ಕಾಲೇಜು ಮೈದಾನಕ್ಕೆ ಸಿದ್ಧತೆ ಪರಿಶೀಲನೆ ನಡೆಸಲು ಆಗಮಿಸಿದ ಅವರು ನಮ್ಮ ಸರ್ಕಾರದಿಂದ ನಡೆಯುತ್ತಿರುವ ನಾಲ್ಕನೇ ಬೃಹತ್ ಉದ್ಯೋಗ ಮೇಳ ಇದಾಗಿದ್ದು, ಮೈಸೂರು,ಕೊಡಗು ಚಾಮರಾಜನಗರ, ಮಂಡ್ಯ ಹಾಸನ ಈ ಐದು ಜಿಲ್ಲೆಗಳ ಉದ್ಯೋಗಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ 200 ಕಂನಿಗಳು ಪಾಲ್ಗೊಳ್ಳಲಿವೆ. ಕೆ.ಕೆ.ಟೈಯರ್ಸ್, ನೆಸ್ಟ್ಲೆ, ಎಲ್&ಟಿ ಪೈನಾನ್ಶಿಯಲ್, ಟೊಯೋಟಾ, ರಿಲಯನ್ಸ್, ಕೊಟಾಕ್ ಮಹೀಂದ್ರ ಬ್ಯಾಂಕ್, ಸೇರಿದಂತೆ ಬೃಹತ್ ಕಂಪನಿಗಳು ಆಗಮಿಸಲಿವೆ. ನಿನ್ನೆ ತನಕ 9613ಹುದ್ದೆ ಬಂದಿತ್ತು. ಅವರಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಹುದ್ದೆಗಳಿವೆಯಂತೆ. ನಾಳೆಯತನಕ ಇನ್ನು ಹೆಚ್ಚಾಗಬಹುದು ಎಂದರು.
ಬರುವವರಿಗೆ ಊಟ ತಿಂಡಿ ಎಲ್ಲ ವ್ಯವಸ್ಥೆಯನ್ನೂ ಮಾಡಲಾಗಿದೆ. ಶನಿವಾರ ದಿನ ಪೂರ್ತಿ ತರಬೇತಿ ನಡೆಯಲಿದೆ. ಮಾರ್ಚ್ 3ರಂದು ಉದ್ಘಾಟನೆ ನಡೆಯಲಿದ್ದು, 4 ಮತ್ತು 5ರಂದು ಉದ್ಯೋಗ ಮೇಳ ನಡೆಯಲಿದೆ. 5ರಂದು ಸಂಜೆ 6ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಯೋಗ ಮೇಳದಲ್ಲಿ ಆಯ್ಕೆಯಾದವರಿಗೆ ಉದ್ಯೋಗ ಪತ್ರ ನೀಡಲಿದ್ದಾರೆ. ಐದು ಜಿಲ್ಲೆಗಳ ಉಸ್ತುವಾರಿ ಸಚಿವರು ಪಾಲ್ಗೊಳ್ಳಲಿದ್ದಾರೆ. ಎಲ್ಲ ರೀತಿಯ ಸಿದ್ಧತೆಯೂ ನಡೆದಿದೆ. ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ಯುವಕರು ಸ್ವಂತ ಉದ್ಯೋಗ ಕಲ್ಪಿಸಿಕೊಳ್ಳುವಂತಾಗಲಿ ಎಂಬುದೇ ನಮ್ಮ ಉದ್ದೇಶವಾಗಿದ್ದು, ಎಲ್ಲರಿಗೂ ಕೆಲಸ ಸಿಗಲಿ ಎಂದರು.
ಈ ಸಂದರ್ಭ ಉದ್ಯೋಗ ಮೇಳ ನಿರ್ವಹಣೆ ಸಂಬಂಧಿತ ಅಪರ ಜಿಲ್ಲಾಧಿಕಾರಿ. ಯೋಗೀಶ್, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಸೋಮಶೇಖರ್, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಸೇರಿದಂತೆ ಹಲವು ಅಧಿಕಾರಿಗಳು ಶಾಸಕರ ಜೊತೆಗಿದ್ದರು.