ಕಾವೇರಿ ಹೋರಾಟಗಾರರ ವಿರುದ್ಧ ಪ್ರಕರಣ ಖುಲಾಸೆ
Update: 2018-03-01 17:42 GMT
ಮಂಡ್ಯ, ಮಾ.1: 2012ರಲ್ಲಿ ಕಾವೇರಿ ಹೋರಾಟಕ್ಕೆ ಸಂಬಂಧಿಸಿದಂತೆ ಮಂಡ್ಯ ನಗರ ರೈಲು ನಿಲ್ದಾಣದಲ್ಲಿ ರೈಲು ತಡೆದು ಪ್ರತಿಭಟಿಸಿದ ಪ್ರಕರಣದ ಹೋರಾಟಗಾರರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ತತ್ಕ್ಷಣದಿಂದ ಕರ್ನಾಟಕವು ತಮಿಳುನಾಡಿಗೆ 18 ಟಿಎಂಸಿ ನೀರು ಬಿಡುವಂತೆ ಕಾವೇರಿ ನದಿ ಪ್ರಾಧಿಕಾರ ಆದೇಶದ ವಿರುದ್ಧ ಹೋರಾಟಗಾರರು ರೈಲು ತಡೆದು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಾವೇರಿ ಕಣಿವೆ ರೈತ ಒಕ್ಕೂಟದ ಎಂ.ಬಿ.ನಾಗಣ್ಣಗೌಡ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಎಚ್.ಡಿ.ಜಯರಾಂ ನೇತೃತ್ವದಲ್ಲಿ ಚೆನ್ನೈಗೆ ತೆರಳುತ್ತಿದ್ದ ಕಾವೇರಿ ಎಕ್ಸ್ ಪ್ರೆಸ್ ರೈಲನ್ನು ತಡೆದು ಪ್ರತಿಭಟನೆ ನಡೆಸಿದ್ದರು.
ರೈಲ್ವೆ ಪೊಲೀಸರು ದಾಖಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ನಗರದ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತಿತ್ತು. ಗುರುವಾರ ಹೋರಾಟಗಾರರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.