ಹುಲಿ ರಕ್ಷಿತಾರಣ್ಯದ ನಿರ್ದೇಶಕ ಮಣಿಕಂಠನ್ ಓರ್ವ ಪ್ರಾಮಾಣಿಕ ವ್ಯಕ್ತಿ: ಎಪಿಸಿಸಿ ಜಗತ್ ರಾಮ್
ಮೈಸೂರು,ಮಾ.5: ಕಾಡಾನೆ ದಾಳಿಗೆ ಸಿಲುಕಿ ಶನಿವಾರ ಮೃತಪಟ್ಟ ನಾಗರಹೊಳೆ ಹುಲಿ ರಕ್ಷಿತಾರಣ್ಯದ ನಿರ್ದೆಶಕ ಮಣಿಕಂಠನ್ ಅವರಿಗೆ ಅರಣ್ಯಭವನದಲ್ಲಿ ಸೋಮವಾರ ಸಭೆ ಏರ್ಪಡಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಅರಣ್ಯ ಭವನದಲ್ಲಿ ನಡೆದ ಶ್ರದ್ದಾಂಜಲಿ ಸಭೆಯಲ್ಲಿ ಎಪಿಸಿಸಿ ಜಗತ್ ರಾಮ್ ಮಾತನಾಡಿ, ಮಣಿಕಂದನ್ ಓರ್ವ ನಿಷ್ಠಾವಂತ ಅಧಿಕಾರಿ. ಯಾವುದೇ ಕೆಲಸವನ್ನು ನಿರ್ಭೀತಿಯಂದ ನಿಭಾಯಿಸುತ್ತಿದ್ದರು. ಅಷ್ಟೇ ಧೈರ್ಯ ಮತ್ತು ಪ್ರಾಮಾಣಿಕತೆ ಅವರಲ್ಲಿತ್ತು. ತಮ್ಮ ಬುದ್ದಿವಂತಿಕೆಯಿಂದ ಕಾಡಿನ ಸರ್ವತೋಮುಖ ಅಭಿವೃದ್ದಿಗೆ ವಿಶಿಷ್ಟ ಸೇವೆಯನ್ನು ಅವರು ಸಲ್ಲಿಸುತ್ತಿದ್ದರು ಎಂದು ಸ್ಮರಿಸಿದರು.
ತಮ್ಮ ಸೇವಾ ಅವಧಿಯಲ್ಲಿ ತಮ್ಮ ಹಿರಿಯ ಕಿರಿಯ ಅಧಿಕಾರಿಗಳ ಜೊತೆ ಬಹಳ ಗೌರವದಿಂದ ಮಣಿಕಂದನ್ ನಡೆದುಕೊಳ್ಳುತ್ತಿದ್ದರು. ಆವರ ಸಾವು ಅರಣ್ಯ ಇಲಾಖೆಗೆ ಅಷ್ಟೇ ಅಲ್ಲ, ಇಡೀ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ ಹಾಗು ಅವರ ಕುಟುಂಬಕ್ಕೆ ದುಖ: ಸಹಿಸುವ ಶಕ್ತಿಯನ್ನು ಆ ದೇವರು ಕರುಣಿಸಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿಸಿಎಫ್ ಕರುಣಾಕರ್, ಡಿಎಫ್ಒಗಳಾದ ಏಡುಕೊಂಡಲು, ಹನುಮಂತಪ್ಪ, ನಾಗರಾಜು, ಆರ್ ಎಫ್ ಒ ದೇವರಾಜು, ಗೋವಿಂದರಾಜು, ಅನನ್ಯ ಕುಮಾರ್ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.