ಹತರಾದ 9 ನಕ್ಸಲರ ಮೃತದೇಹ ಇನ್ನೂ ಶವಾಗಾರದಲ್ಲಿ
Update: 2018-03-05 17:14 GMT
ಹೈದರಾಬಾದ್, ಮಾ.5: ಛತ್ತೀಸ್ಗಡದ ಬಿಜಾಪುರ್ ಜಿಲ್ಲೆಯ ಬಳಿ ಕಳೆದ ವಾರ ನಡೆದ ಎನ್ಕೌಂಟರ್ನಲ್ಲಿ ಕೊಲ್ಲಲ್ಪಟ್ಟ ಮಾವೋವಾದಿಗಳ ಪೈಕಿ 9 ಮಂದಿಯ ಮೃತದೇಹವನ್ನು ಸ್ವೀಕರಿಸಲು ಇದುವರೆಗೂ ಯಾರೂ ಮುಂದೆ ಬಂದಿಲ್ಲ ಎಂದು ತೆಲಂಗಾಣ ಪೊಲೀಸರು ತಿಳಿಸಿದ್ದಾರೆ.
ಇವರೆಲ್ಲಾ ಛತ್ತೀಸ್ಗಡ ಮೂಲದವರು. ಇವರ ಭಾವಚಿತ್ರವನ್ನು ಛತ್ತೀಸ್ಗಡ ರಾಜ್ಯದ ಪೊಲೀಸರಿಗೆ ಕಳುಹಿಸಲಾಗಿದೆ. ಮೃತರ ಸಂಬಂಧಿಗಳು ಅಥವಾ ಗ್ರಾಮದ ಹಿರಿಯರು ಮುಂದೆ ಬಂದು ಮೃತದೇಹಗಳನ್ನು ಪಡೆಯುವರೆಂದು ನಿರೀಕ್ಷಿಸಿದ್ದೇವೆ. ಈಗ ಈ ಮೃತದೇಹಗಳನ್ನು ತೆಲಂಗಾಣದ ಭದ್ರಾಚಲಂನಲ್ಲಿರುವ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾ.2ರಂದು ಬಿಜಾಪುರ್ ಜಿಲ್ಲೆಯ ಪುಜಾರಿ ಕಾಂಕೆರ್ ಎಂಬಲ್ಲಿ ತೆಲಂಗಾಣ ಹಾಗೂ ಆಂಧ್ರಪ್ರದೇಶದ ವಿಶೇಷ ನಕ್ಸಲ್ ನಿಗ್ರಹ ದಳ ನಡೆಸಿದ್ದ ಎನ್ಕೌಂಟರ್ನಲ್ಲಿ 7 ಮಹಿಳೆಯರು ಸೇರಿದಂತೆ 10 ಮಾವೋವಾದಿಗಳು ಹತರಾಗಿದ್ದರು. ನಕ್ಸಲ್ ನಿಗ್ರಹ ದಳದ ಯೋಧ ಕೂಡಾ ಹುತಾತ್ಮನಾಗಿದ್ದ.