ಮರಕ್ಕೆ ಕಾರು ಢಿಕ್ಕಿ : ಐವರು ಮೃತ್ಯು
ಹೈದರಾಬಾದ್, ಮಾ.9: ಕಾರೊಂದು ಮರಕ್ಕೆ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟು ಮೂವರು ಗಾಯಗೊಂಡ ಘಟನೆ ಆಂಧ್ರಪ್ರದೇಶದ ಖಯ್ಯಮ್ ಜಿಲ್ಲೆಯ ಪಲ್ಲಿಪಾಡು ಎಂಬಲ್ಲಿ ಶುಕ್ರವಾರ ಬೆಳಗ್ಗಿನ ಜಾವ ನಡೆದಿದೆ.
ನಿನ್ನೆಯಷ್ಟೇ ದಾಂಪತ್ಯ ಬದುಕಿಗೆ ಕಾಲಿರಿಸಿದ ವರ ರಾಮಕೃಷ್ಣ ಪ್ರಸಾದ್ ಮತ್ತು ಅವರ ಸಂಬಂಧಿಕರಾದ ಸೇಶಾಚಲಪತಿ, ವೇಣು, ಶ್ರೀಧೇವಿ ಮತ್ತು ಪದ್ಮಾ ಮೃತಪಟ್ಟವರು ಎಂದು ಗುರುತಿಸಲಾಗಿದೆ. ರಾಮಕೃಷ್ಣ ಪ್ರಸಾದ್ ಪತ್ನಿ ಸ್ವಪ್ನಾ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಅವರನ್ನು ಖಯ್ಯಂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಮೂವರು ಮಕ್ಕಳು ಸೇರಿದ್ದಾರೆ. ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಟಾಡೆಪಲ್ಳಿಗುಡೆಮ್ ಎಂಬಲ್ಲಿ ಗುರುವಾರ ರಾತ್ರಿ ರಾಮಕೃಷ್ಣ ಪ್ರಸಾದ್ ಮತ್ತು ಸ್ವಪ್ನಾ ವಿವಾಹ ನೆರವೇರಿತ್ತು.
ರಾಮಕೃಷ್ಣ ಪ್ರಸಾದ್ ಅವರು ತನ್ನ ಪತ್ನಿ ಮತ್ತು ಸಂಬಂಧಿಕರ ಜೊತೆ ವಾರಂಗಲ್ ಜಿಲ್ಲೆಯ ಮನೆಗೆ ಕಾರಿನಲ್ಲಿ ವಾಪಸಾಗುತ್ತಿದ್ದಾಗ, ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿತು ಎಂದು ತಿಳಿದು ಬಂದಿದೆ.