ಸುರೇಶ್ ಪ್ರಭುಗೆ ಹೆಚ್ಚುವರಿ ಜವಾಬ್ದಾರಿಯಾಗಿ ನಾಗರಿಕ ವಿಮಾನ ಯಾನ ಖಾತೆ

Update: 2018-03-10 15:11 GMT

ಹೊಸದಿಲ್ಲಿ, ಮಾ. 10: ಕೇಂದ್ರ ಸಚಿವ ಹಾಗೂ ಟಿಡಿಪಿ ಸಂಸದರಾದ ಅಶೋಕ ಗಜಪತಿ ರಾಜು ಅವರ ರಾಜೀನಾಮೆ ಸ್ವೀಕರಿಸಿದ ಒಂದು ದಿನದ ಬಳಿಕ ರಾಷ್ಟ್ರಪತಿ ರಾಮನಾಥ್ ಕೋವಿಂದ್, ನಾಗರಿಕ ವಿಮಾನ ಯಾನ ಖಾತೆಯ ನಿರ್ವಹಣೆ ಜವಾಬ್ದಾರಿಯನ್ನು ಸುರೇಶ್ ಪ್ರಭು ಅವರಿಗೆ ವಹಿಸಿದ್ದಾರೆ. ಸುರೇಶ್ ಪ್ರಭು ಅವರಿಗೆ ಈಗಿರುವ ವಾಣಿಜ್ಯ ಖಾತೆಯ ಜೊತೆಗೆ ಹೆಚ್ಚುವರಿಯಾಗಿ ಈ ಖಾತೆ ಜವಾಬ್ದಾರಿ ವಹಿಸಲಾಗಿದೆ. ‘‘ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯಂತೆ ರಾಷ್ಟ್ರಪತಿ ಅವರು ಸುರೇಶ್ ಪ್ರಭು ಅವರಿಗೆ ಈಗಿರುವ ಖಾತೆ ಜೊತೆ ಹೆಚ್ಚುವರಿಯಾಗಿ ನಾಗರಿಕ ವಿಮಾನ ಯಾನ ಖಾತೆಯ ಜವಾಬ್ದಾರಿ ವಹಿಸಿದ್ದಾರೆ’’ ಎಂದು ರಾಷ್ಟ್ರಪತಿ ಭವನ ಟ್ವೀಟ್ ಮಾಡಿದೆ. ಕೇಂದ್ರ ಸಂಪುಟದ ನಾಗರಿಕ ವಿಮಾನ ಯಾನ ಖಾತೆಯ ಸಚಿವರಾದ ಅಶೋಕ ಗಜಪತಿ ರಾಜು ಹಾಗೂ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯಕ ಸಚಿವ ವೈ.ಎಸ್. ಚೌಧರಿ ಅವರ ರಾಜೀನಾಮೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶುಕ್ರವಾರ ಸ್ವೀಕರಿಸಿದ್ದರು. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಕೇಂದ್ರ ಸರಕಾರ ನಿರಾಕರಿಸಿರುವುದಕ್ಕೆ ಪ್ರತಿಭಟನೆಯಾಗಿ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡುವಂತೆ ಟಿಡಿಪಿ ವರಿಷ್ಠ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇಬ್ಬರು ಸಚಿವರಿಗೆ ನಿರ್ದೇಶಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News