ಹನೂರು: ಜೋಳದ ಕಡ್ಡಿಯ ಮೆದೆಗೆ ಬೆಂಕಿ; ಅಪಾರ ನಷ್ಟ
ಹನೂರು,ಮಾ.10: ವಿದ್ಯುತ್ ಕಂಬದಿಂದ ಕಿಡಿಯೊಂದು ತಾಗಿ ಜೋಳದ ಕಡ್ಡಿಯ ಮೆದೆಗೆ ಬೆಂಕಿ ತಗುಲಿದ ಪರಿಣಾಮ ಸುಮಾರು 50 ಸಾವಿರ ರೂ. ಮೌಲ್ಯದ ಮೇವಿನ ಕಡ್ಡಿ ಬೆಂಕಿಗಾಹುತಿಯಾಗಿರುವ ಘಟನೆ ಒಡೆಯರಪಾಳ್ಯ ಸಮೀಪದ ಬಸವನಗುಡಿ ಗ್ರಾಮದಲ್ಲಿ ಜರುಗಿದೆ.
ಬಸವನಗುಡಿ ಗ್ರಾಮದ ಮಾದ ಎಂಬುವವರು ತಮ್ಮ ರಾಸುಗಳಿಗಾಗಿ ಜೋಳದ ಕಡ್ಡಿಯ ಮೆದೆ ಹಾಕಿದ್ದರು. ಆದರೆ ಶನಿವಾರ ಮಧ್ಯಾಹ್ನ 1 ಗಂಟೆ ವೇಳೆಯಲ್ಲಿ ವಿದ್ಯುತ್ ಕಂಬದಿಂದ ಬೆಂಕಿಯ ಕಿಡಿಯೊಂದು ಮೆದೆಗೆ ತಾಕಿ ಬೆಂಕಿ ಹೊತ್ತಿಕೊಂಡಿದೆ. ಇದು ಸ್ಥಳೀಯರ ಗಮನಕ್ಕೆ ಬಂದು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಆದರೆ ಈ ವೇಳೆಗಾಲೇ ಬೆಂಕಿಯ ಜ್ವಾಲೆ ಹೆಚ್ಚಾಗಿ ಹೊತ್ತಿಉರಿದು ಸುಮಾರು 50ಸಾವಿರ ರೂ. ಮೌಲ್ಯದ ಮೇವು ಬೆಂಕಿಗಾಹುತಿಯಾಗಿದೆ. ಈ ಹೊತ್ತಿಗೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.
ಪರಿಹಾರಕ್ಕೆ ಒತ್ತಾಯ: ಘಟನೆಯಿಂದಾಗಿ ಸುಮಾರು 50ಸಾವಿರ ಮೌಲ್ಯದ ಮೇವು ಬೆಂಕಿಗಾಹುತಿಯಾಗಿದೆ. ಇದರಿಂದ ತಮ್ಮ ಜಾನುವಾರುಗಳಿಗೆ ಮೇವೂ ಇಲ್ಲದಂತಾಗಿದೆ. ಈಗಾಗಲೇ ಬೇಸಿಗೆಯ ಬೇಗೆ ಪ್ರಾರಂಭವಾಗಿದ್ದು ಮುಂದಿನ ದಿನಗಳಲ್ಲಿ ಮೇವಿಗೆ ಪರದಾಡುವಂತಾಗಿದೆ. ಆದುದರಿಂದ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ಕಲ್ಪಿಸುವಂತೆ ರೈತ ಮಾದ ಒತ್ತಾಯಿಸಿದ್ದಾರೆ.