ನೆಟ್ಬ್ಯಾಂಕಿಂಗ್ ಬಗ್ಗೆ ಸೈಬರ್ ಭದ್ರತಾ ಮುಖ್ಯಸ್ಥರಿಗೇ ಅನುಮಾನ!
ಹೊಸದಿಲ್ಲಿ, ಮಾ.16: ಕೇಂದ್ರ ಸರ್ಕಾರ ಡಿಜಿಟಲ್ ವಹಿವಾಟಿಗೆ ಹೆಚ್ಚು ಒತ್ತು ನೀಡಿದರೂ, ದೇಶದ ಸೈಬರ್ ಭದ್ರತಾ ಮುಖ್ಯಸ್ಥ ಗುಲ್ಶನ್ ರಾಯ್ ಮಾತ್ರ ಇಂಟರ್ನೆಟ್ ಬ್ಯಾಂಕಿಂಗ್ ಬಳಸುವುದು ಅಪರೂಪ ಎನ್ನುವ ಕುತೂಹಲಕಾರಿ ಅಂಶ ಬಹಿರಂಗವಾಗಿದೆ. "ಇಂಟರ್ನೆಟ್ ಬ್ಯಾಂಕಿಂಗ್ನ ಸಮಸ್ಯೆಗಳ ಅರಿವು ನನಗಿದೆ" ಎಂದು ಗುರುವಾರ ರಾಯ್ ಸ್ವತಃ ಒಪ್ಪಿಕೊಂಡರು. ಈ ಮೂಲಕ ಆನ್ಲೈನ್ ವಹಿವಾಟು ಮಾಡುವವರು ಅಪಾಯ ಸಾಧ್ಯತೆಗಳ ಬಗ್ಗೆ ತಿಳಿದುಕೊಂಡಿರಬೇಕು ಎಂಬ ಸುಳಿವನ್ನೂ ನೀಡಿದರು.
"ಡಿಜಿಟಲ್ ಮಾರ್ಕೆಟ್ಪ್ಲೇಸ್ನ ನಿಯಂತ್ರಕರು ಯಾರು? ಗ್ರಾಹಕರ ವ್ಯಾಜ್ಯವನ್ನು ನಾವು ಹೇಗೆ ನಿರ್ವಹಿಸುತ್ತೇವೆ? ಎಟಿಎಂ ಹಾಗೂ ಕ್ರೆಡಿಟ್ ಕಾರ್ಡ್ಗಳಲ್ಲಿನ ವಂಚನೆಗಳು ತೀರಾ ಸಂಕೀರ್ಣ ಹಾಗೂ ಅದನ್ನು ಪರಿಹರಿಸುವುದು ಕಷ್ಟಕರ" ಎಂದು ಗ್ರಾಹಕ ವ್ಯವಹಾರಗಳ ಖಾತೆ ಸಚಿವ ರಾಮ್ವಿಲಾಸ್ ಪಾಸ್ವಾನ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲೇ ರಾಯ್ ಅಭಿಪ್ರಾಯಪಟ್ಟರು.
"ಸಣ್ಣ ಮೊತ್ತವನ್ನು ಇಡಲು ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ನಾನು ಹೊಂದಿದ್ದೇನೆ. ಡೆಬಿಡ್ ಕಾರ್ಡ್ ಮೂಲಕ ವ್ಯವಹರಿಸಬೇಕಿದ್ದರೆ, 25 ಸಾವಿರ ರೂಪಾಯಿಯನ್ನು ಆ ಖಾತೆಗೆ ಜಮೆ ಮಾಡುತ್ತೇನೆ. ಆದ್ದರಿಂದ ನಾನು ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗಕ್ಕೆ ಹೋಗಬೇಕಿಲ್ಲ" ಎಂದು ಹೇಳಿದರು.