ಎಟಿಎಂ ಒಡೆದು 6 ಲಕ್ಷ ರೂ. ದೋಚಿದರು!
ಕೊಲ್ಲಂ, ಮಾ. 19: ಜಿಲ್ಲೆಯ ಕೊಟ್ಟಿಯಂ ತಯುತ್ತಲದಲ್ಲಿ ಎಟಿಎಂ ಒಡೆದು ಕಳ್ಳರು 6,16,00 ರೂಪಾಯಿ ದೋಚಿದ್ದಾರೆ. ಕೊಟ್ಟಿಯಂ-ಕಣ್ಣನಲ್ಲೂರ್ ರಸ್ತೆಯ ತಯುತ್ತಲ ಮಹಾಗಣಪತಿ ದೇವಸ್ಥಾನದ ಸಮೀಪದ ಇಂಡಿಯ ವನ್ ಎಟಿಎಂ ಒಡೆದು ಹಣವನ್ನು ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಮಧ್ಯರಾತ್ರಿ ದರೋಡೆ ನಡೆದಿರಬಹುದು ಎಂದು ಶಂಕಿಸಲಾಗಿದ್ದು, ಎಟಿಎಂನ ಮುಭಾಗದಲ್ಲಿರಿಸಲಾಗಿದ್ದ ನಿಗಾ ಕ್ಯಾಮರವನ್ನು ಒಡೆದು ಹಾಕಲಾಗಿದೆ. ಸಿಸಿಟಿವಿ ಕ್ಯಾಮರಾದ ಹಾರ್ಡ್ ಡಿಸ್ಕ್ನ್ನು ಪೊಲೀಸರರು ಪರಿಶೀಲಿಸುತ್ತಿದ್ದಾರೆ.
ಡಿಸ್ಕ್ನಲ್ಲಿ ತಮಗೆ ದರೋಡೆಕೋರರ ವಿವರ ಸಿಕ್ಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರವಿವಾರ ಬೆಳಗ್ಗೆ ಎಟಿಎಂ ಶುಚಿಗೊಳಿಸುವ ಸಿಬ್ಬಂದಿ ಬಂದಾಗ ಎಟಿಎಂ ದರೋಡೆ ಆಗಿರುವುದು ಕಂಡು ಬಂದಿತ್ತು.
ಗ್ಯಾಸ್ ಕಟ್ಟರ್ ಬಳಸಿ ಎಟಿಎಂ ಒಡೆದು ಹಾಕಿ ಹಣವನ್ನು ಕಳವು ಗೈಯಲಾಗಿದೆ. ಶುಕ್ರವಾರ ಈ ಎಟಿಎಂಗೆ ಹಣ ತುಂಬಲಾಗಿತ್ತು ಎಂದು ಎಟಿಎಂ ಪ್ರಾಂಚೈಸಿ ವಹಿಸಿಕೊಂಡಿರುವ ಕಲ್ಲಡದ ಅಭಿಲಾಶ್ ತಿಳಿಸಿದ್ದಾರೆ. ಬೆರಳಚ್ಚು ತಜ್ಞರೂ ಸ್ಥಳಕ್ಕೆ ಧಾವಿಸಿದ್ದಾರೆ. ಕೊಲ್ಲಂ ಸಿಟಿ ಪೊಲೀಸ್ ಕಮಿಶನರ್ ಡಾ. ಶ್ರೀನಿವಾಸನ್, ಚಾತ್ತನ್ನೂರ್ ಅಸಿಸ್ಟೆಂಟ್ ಕಮಿಶನರ್ ಜವಾಹರ್ ಜನಾರ್ದ್, ಕೊಟ್ಟಿಯಂ ಸಿಐ ಅಜಯ್ ನಾಥ್, ಎಸ್ಸೈ ಅನೂಪ್ ಸ್ಥಳದಲ್ಲಿ ತಪಾಸಣೆ ನಡೆಸಿದ್ದಾರೆ.