ತಂಬಾಕು ಸೇವನೆಯಿಂದ ಕ್ಯಾನ್ಸರ್ ಗೆ ತುತ್ತಾಗಿದ್ದ ಶರದ್ ಪವಾರ್ ಅನುಭವಿಸಿದ ಸಂಕಷ್ಟಗಳೇನು?
ಮುಂಬೈ, ಮಾ.19: ಹಿಂದೆ ತಂಬಾಕು ಮತ್ತು ಸುಪಾರಿ ಸೇವನೆ ಮಾಡಿರುವ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ) ದ ಮುಖ್ಯಸ್ಥ ಶರದ್ ಪವಾರ್, 40 ವರ್ಷಗಳ ಹಿಂದೆ ಯಾರಾದರೂ ನನಗೆ ತಂಬಾಕು ಸೇವನೆಯ ಅಪಾಯದ ಬಗ್ಗೆ ಎಚ್ಚರಿಸಬೇಕಿತ್ತು ಎಂದು ತಿಳಿಸಿದ್ದಾರೆ. ಕ್ಯಾನ್ಸರ್ ಕಾಯಿಲೆಗೆ ಪೀಡಿತರಾಗಿ ನೋವನುಭವಿಸಿರುವ ಪವಾರ್, ಇಂಡಿಯನ್ ಡೆಂಟಲ್ ಅಸೋಸಿಯೇಶನ್ (ಐಡಿಎ) ನ 2022ರ ವೇಳೆಗೆ ಬಾಯಿ ಕ್ಯಾನ್ಸರನ್ನು ಸಂಪೂರ್ಣವಾಗಿ ತೊಲಗಿಸುವ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಈ ವಿಷಯ ತಿಳಿಸಿದ್ದಾರೆ. ಕ್ಯಾನ್ಸರ್ನಿಂದಾಗಿ ತಾನು ಬಹಳ ಕಷ್ಟಪಡಬೇಕಾಯಿತು ಎಂದು ತಿಳಿಸಿದ ಮಾಜಿ ಕೇಂದ್ರ ಕೃಷಿ ಸಚಿವರಾದ ಪವಾರ್, ಶಸ್ತ್ರಚಿಕಿತ್ಸೆ ನಡೆಸುವ ಸಲುವಾಗಿ ನನ್ನ ಹಲ್ಲುಗಳನ್ನು ಕಿತ್ತಾಗ ಮತ್ತು ನಂತರ ತಿನ್ನಲು ಮತ್ತು ಮಾತನಾಡಲು ಬಾಯಿ ತೆರೆಯಲು ಉಂಟಾದ ಸಮಸ್ಯೆಯಿಂದಾಗಿ ನಾನು ಬಹಳವಾಗಿ ನೋವನ್ನು ಅನುಭವಿಸಿದ್ದೇನೆ ಎಂದು ತಿಳಿಸಿದ್ದಾರೆ.
ಐಡಿಎಯ ಯೋಜನೆಯನ್ನು ತಾನು ಬೆಂಬಲಿಸುವುದಾಗಿ ತಿಳಿಸಿದ ಪವಾರ್ ತಂಬಾಕು, ಸುಪಾರಿಯಂತಹ ಮಾರಣಾಂತಿಕ ವ್ಯಸನಗಳಿಗೆ ಜನರು ಬಲಿ ಬೀಳುತ್ತಿರುವುದು ಖೇದಕರ ಈ ಬಗ್ಗೆ ಸಂಸತ್ನಲ್ಲಿ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದರು.