ರಾಜ್ಯದ ಹಲವು ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ
ಬೆಂಗಳೂರು, ಮಾ.20: ರಾಜ್ಯದ ವಿವಿಧ ಜಿಲ್ಲೆಗಳ ಹಲವು ಮಂದಿ ಅಧಿಕಾರಿಗಳ ಮನೆಗಳ ಮೇಲೆ ಇಂದು ಬೆಳಗ್ಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಎಸಿಬಿ ಎಸ್ಪಿ ಅಮರನಾಥ್ ರೆಡ್ಡಿ ನೇತೃತ್ವದ ತಂಡ ಬೆಳಗಾವಿ ಸ್ಮಾರ್ಟ್ ಸಿಟಿ ಎಂಜನಿಯರ್ ಕಿರಣ್ ಸುಬ್ಬರಾವ್ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದರು.
ಕಲಬುರಗಿಯ ಹುಮ್ನಾಬಾದ್ ತಾಲೂಕಿನ ಕಾರಾಂಜಾ ನೀರಾವರಿ ಯೋಜನೆಯ ಎಇಇ ವಿಜಯ್ ಕುಮಾರ್ ಮನೆಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಭಗವತಿ ನಗರದಲ್ಲಿರುವ ವಿಜಯ್ ಕುಮಾರ್ ಮನೆ ಹಾಗೂ ಬೀದರ್ ಜಿಲ್ಲೆಯ ಬಸವ ಮುಂಚಬಾಳ ಗ್ರಾಮದ ಮನೆಯ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಸಾರಿಗೆ ಇಲಾಖೆಯ ಉಪ ಮುಖ್ಯ ಭದ್ರತಾ ಅಧಿಕಾರಿ ಶ್ರೀಪತಿ ದೊಡ್ಡ ಲಿಂಗಣ್ಣನವರ ನಿವಾಸದ ಮೇಲೂ ಎಸಿಬಿ ದಾಳಿ ನಡೆದಿದೆ.
ಪಶ್ಚಿಮ ವಲಯದ ಎಸ್ಪಿ ಶೃತಿ ಹಾಗೂ ಚಿಕ್ಕಮಗಳೂರಿನ ಎಸಿಬಿ ಡಿವೈಎಸ್ಪಿ ನಾಗೇಶ್ ಶೆಟ್ಚಿ ನೇತೃತ್ವದ ಎಸಿಬಿ ಅಧಿಕಾರಿಗಳು ಚಿಕ್ಕಮಗಳೂರಿನ ಉಪ ತಹಶಿಲ್ದಾರ್ ಕೀರ್ತಿ ಜೈನ್ ನಿವಾಸ, ಕಚೇರಿ ಹಾಗೂ ಸಂಬಂಧಿಕರ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಧಾರವಾಡದ ಶ್ರೀಪತಿ ದೊಡ್ಡಲಿಂಗಣ್ಣ ಎಂಬುವವರ ಮನೆ ಮೇಲೆ ದಾಳಿ ನಡೆಸಿದ್ದಾರೆ.ದಾವಣಗೆರೆ ದೂಡಾ ಜಂಟಿ ನಿರ್ದೇಶಕ ಗೋಪಾಲಕೃಷ್ಣ ಮನೆ ಮೇಲೆ ಎಸಿಬಿ ದಾಳಿ ನಡೆದಿದೆ. ನಿಟ್ಟುವಳ್ಳಿ ಸಿದ್ದರಾಮೇಶ್ವರ ಬಡಾವಣೆ ಮನೆ , ದೂಡಾ ಕಚೇರಿ , ದಾವಣಗೆರೆ ಮಹಾನಗರಪಾಲಿಕೆ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಲಾಗಿದೆ.