ಮುಂಡಗೋಡ: ನೇಣು ಬಿಗಿದ ಸ್ಥಿತಿಯಲ್ಲಿ ಶಿಕ್ಷಕ- ಶಿಕ್ಷಕಿಯ ಮೃತದೇಹ ಪತ್ತೆ
ಮುಂಡಗೋಡ,ಮಾ.21: ಮುಂಡಗೋಡ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಯುವ ಪ್ರೇಮಿಗಳು ಕುಮಟಾ ತಾಲೂಕಿನ ಯಾಣ ಕ್ರಾಸ್ ನ ಅರಣ್ಯದಲ್ಲಿ ನೇಣು ಬೀಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.
ಆತ್ಮಹತ್ಯೆಗೆ ಶರಣಾದವರನ್ನು ಬಂಟ್ವಾಳ ಮೂಲದ ಹಾಲಿ ಮುಂಡಗೋಡ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕಿ ಪ್ರಜ್ಞಾ ಪಿ.ಎಸ್. ಹಾಗೂ ಅದೇ ಶಾಲೆಯ ಶಿಕ್ಷಕ ಸಾಲಗಾಂವ ಗ್ರಾಮದ ವಿಠ್ಠಲ್ ಸುಬ್ಬಣ್ಣವರ ಎಂದು ಹೇಳಲಾಗುತ್ತಿದೆ.
ಯುವ ಶಿಕ್ಷಕ ಪ್ರೇಮಿಗಳು ಮಾರ್ಚ್ 3 ರಂದು ನಾಪತ್ತೆಯಾಗಿದ್ದರು. ಈ ಕುರಿತು ಶಿಕ್ಷಕಿಯ ತಾಯಿ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ತಮ್ಮ ಮಗಳಿಗೆ ಶಿಕ್ಷಕ ವಿಠ್ಠಲ ಸುಬ್ಬಣ್ಣವರ ಜತೆ ಪ್ರೇಮ ಸಂಬಂದವಿತ್ತು ಎಂದು ಉಲ್ಲೇಖಿಸಿ, ತಮ್ಮ ಮಗಳನ್ನು ಹುಡುಕಿಕೊಡಿ ಎಂದು ದೂರು ದಾಖಲಿಸಿದ್ದರು.
ತಮ್ಮ ವಾಹನದ ಮೇಲೆ ನಿಂತು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಶವಗಳ ಕೊಳೆತ ಸ್ಥಿತಿ ಗಮನಿಸಿದರೆ ನಾಪತ್ತೆಯಾದ ದಿನವೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಮೃತರ ಮನೆಯವರಿಗೆ ಪೊಲೀಸರು ಸುದ್ದಿ ತಲುಪಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಕುಮಟಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ