ಶಿಲಾನ್ಯಾಸ ಮಾಡುತ್ತಿರುವುದು ಅಭಿವೃದ್ದಿಯ ಸಂಕೇತ:ಶಾಸಕ ಆರ್ ನರೇಂದ್ರರಾಜೂಗೌಡ
ಹನೂರು,ಮಾ.22: ಕಾಮಗಾರಿಗಳ ಶಿಲಾನ್ಯಾಸವಾಗುತ್ತಿರುವುದು ಕ್ಷೇತ್ರದ ಅಭಿವೃದ್ದಿಯ ಸಂಕೇತವಾಗಿದೆ ಎಂದು ಇತ್ತೀಚೆಗೆ ವಿರೋಧ ಪಕ್ಷದ ಮುಖಂಡರು ಪತ್ರಿಕೆಗಳಲ್ಲಿ ಶಾಸಕರು ಗುದ್ದಲಿ ಪೂಜೆ ಮಾಡುತ್ತಾರೆ, ಆದರೆ ಕ್ಷೇತ್ರದ ಅಭಿವೃದ್ದಿ ಕುಂಠಿತವಾಗಿದೆ ಎಂಬ ಟೀಕೆಗೆ ಶಾಸಕ ಆರ್ ನರೇಂದ್ರರಾಜೂಗೌಡ ತಿರುಗೇಟು ನೀಡಿದರು.
ಕ್ಷೇತ್ರ ವ್ಯಾಪ್ತಿಯ ರಾಮಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸಮುದಾಯ ಆರೋಗ್ಯ ಕೇಂದ್ರದ ಉನ್ನತೀಕರಣದ ಶಿಲಾನ್ಯಾಸ ನೆರವೇರಿಸಿ ನಂತರ ಮಾತನಾಡಿದ ಅವರು, ರಾಮಪುರ ಗ್ರಾಮದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಉನ್ನತೀಕರಣಕ್ಕಾಗಿ ಸುಮಾರು 2 ಕೋಟಿ ಹಣ ಬಿಡುಗಡೆಯಾಗಿದ್ದು, 30 ಹಾಸಿಗೆಗಳ ಕಟ್ಟಡ ವ್ಯವಸ್ಥೆ ಒದಗಿಸುತ್ತಿದೆ. 3 ಜನ ತಜ್ಞ ವೈದ್ಯರು, ಮತ್ತು ಒಬ್ಬ ದಂತ ವೈದ್ಯರನ್ನು ನೇಮಿಸಲಾಗುವುದು. ಈ ಭಾಗದ ಜನರು ಕೊಳ್ಳೇಗಾಲ ಅಥವಾ ಮೈಸೂರಿಗೆ ಆರೋಗ್ಯ ಸೇವೆಗೆ ಹೋಗದೆ ಇಲ್ಲಿಯೇ ಮುಂದಿನ ದಿನಗಳಲ್ಲಿ ಆರೋಗ್ಯ ಸೇವೆ ನೀಡಲಾಗುವುದು ಎಂದುತಿಳಿಸಿದರು.
ಶಿಲಾನ್ಯಾಸ ಮಾಡುತ್ತಿರುವುದು ಅಭಿವೃದ್ದಿಯ ಸಂಕೇತ: ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕರು ಶಿಲಾನ್ಯಾಸ ಮಾಡುತ್ತಾರೆಯೇ ಹೊರತೂ ಯಾವುದೇ ಅಭಿವೃದ್ದಿ ಕೆಲಸವಾಗಿಲ್ಲ ಎಂದು ಟೀಕಿಸುತ್ತಿದ್ದಾರೆ. ಯಾವುದಾದರು ಕಾಮಗಾರಿಗೆ ಶಿಲಾನ್ಯಾಸ ಮಾಡಿ ಅನುದಾನ ನೀಡಿಲ್ಲವೆಂದರೆ ಟೀಕೆ ಮಾಡುವುದು ಸರಿ, ಆದರೆ ಕ್ಷೇತ್ರದ ಅಭಿವೃದ್ದಿ ಸಹಿಸದೆ ಈ ರೀತಿಯ ಅಸಹನೆಯ ಮಾತನ್ನು ಆಡುತ್ತಿದ್ದಾರೆ ಎಂದು ವಿರೋಧ ಪಕ್ಷದವರ ಹೇಳಿಕೆಗಳಿಗೆ ತಿರುಗೇಟು ನೀಡಿದರು.
ಯಾವುದೇ ಕೆಲಸವಿಲ್ಲದೇ ಶಾಸಕರು ಮಲಗಿದ್ದರೆ, ಕ್ಷೇತ್ರ ಮಲಗಿದೆ ಮತ್ತು ಅಭಿವೃದ್ದಿ ಮಲಗಿದೆ ಎಂದರ್ಥ. ದಿನಾ ಬೆಳಗಾದರೆ ಶಿಲಾನ್ಯಾಸ ಮಾಡುತ್ತಾರೆ ಎಂದರೆ ಅಭಿವೃದ್ದಿಯಾಗುತ್ತಿದೆ ಎಂದರ್ಥ. ವಿರೋಧ ಪಕ್ಷಗಳ ಮುಖಂಡರು ಇದನ್ನು ಅರ್ಥ ಮಾಡಿಕೊಂಡು ಅನಾವಶ್ಯಕ ಟೀಕೆಗಳನ್ನು ಮಾಡುವುದನ್ನು ಬಿಟ್ಟು ಅಭಿವೃದ್ದಿಗೆ ಸಹಕರಿಸಬೇಕು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಸವರಾಜು, ಜಿಲ್ಲಾ ವೈದ್ಯಾಧಿಕಾರಿಗಳಾದ ಡಾ.ಪ್ರಸಾದ್, ತಾಲೂಕು ವೈದ್ಯಾಧಿಕಾರಿಗಳಾದ ಡಾ.ಗೋಪಾಲ್, ಕೊಳ್ಳೇಗಾಲ ತಾಲೂಕು ಪಂಚಾಯತ್ ಅದ್ಯಕ್ಷರಾದ ರಾಜು, ರಾಮಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಪ್ರಕಾಶ್, ತಾಲೂಕು ಪಂಚಾಯತ್ ಸದಸ್ಯ ರಾಜೇಂದ್ರ ಮುಂತಾದವರು ಹಾಜರಿದ್ದರು.