ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ದ: ನಿರ್ಮಲಾ ಸೀತಾರಾಮನ್
ಹೊಸದಿಲ್ಲಿ, ಮಾ. 26: ಡೋಕಾಲಾದಲ್ಲಿ ಯಾವುದೇ ರೀತಿಯ ಪರಿಸ್ಥಿತಿ ಎದುರಿಸಲು ದೇಶ ಸಜ್ಜಾಗಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಭಾರತ ತನ್ನ ಪ್ರಾದೇಶಿಕ ಸಮಗ್ರತೆ ಕಾಯ್ದುಕೊಳ್ಳಲಿದೆ ಎಂದು ಅವರು ತಿಳಿಸಿದರು. ಡೆಹ್ರಾಡೂನ್ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾವು ಜಾಗೃತರಾಗಿದ್ದೇವೆ ಹಾಗೂ ಡೋಕಾಲಾದಲ್ಲಿ ಯಾವುದೇ ರೀತಿ ಪರಿಸ್ಥಿತಿ ಎದುರಿಸಲು ಸಿದ್ದರಾಗಿದ್ದೇವೆ. ನಮ್ಮ ಸೇನೆಯ ಆಧುನಿಕೀಕರಣಕ್ಕೆ ನಾವು ನಿರಂತರ ಕಾರ್ಯ ನಿರ್ವಹಿಸುತ್ತಿದ್ದೇವೆ ಹಾಗೂ ಪ್ರಾದೇಶಿಕ ಸಮಗ್ರತೆ ಕಾಯ್ದುಕೊಳ್ಳಲಿದ್ದೇವೆ ಎಂದರು.
ಭಾರತದ ಗಡಿಗುಂಟ ಯಥಾಸ್ಥಿತಿ ಬದಲಾಯಿಸಲು ಚೀನಾ ಯಾವುದೇ ಪ್ರಯತ್ನ ಇನ್ನೊಂದು ಡೋಕಾಲಾದಂತಹ ಬಿಕ್ಕಟ್ಟಿಗೆ ಕಾರಣವಾಗಬಹುದು. ಆದುದರಿಂದ ಮುಕ್ತ ಮಾತುಕತೆಯಿಂದ ಇಂತಹ ಘಟನೆಗಳನ್ನು ತಡೆಯಬಹುದು ಎಂದು ಹಾಂಗ್ಕಾಂಗ್ ಮೂಲದ ಸೌತ್ ಚೀನ ಮಾರ್ನಿಂಗ್ ಪೋಸ್ಟ್ ಪತ್ರಿಕೆಗೆ ಚೀನಾಕ್ಕಿರುವ ಭಾರತದ ರಾಯಭಾರಿ ಗೌತಮ್ ಬಂಬಾವಾಲೆ ಸಂದರ್ಶನ ನೀಡಿದ ಒಂದು ವಾರದ ಬಳಿಕ ಸೀತಾರಾಮನ್ ಈ ಹೇಳಿಕೆ ನೀಡಿದ್ದಾರೆ.
ರಕ್ಷಣಾ ಸಚಿವರು ಮಾರ್ಚ್ ಆರಂಭದಲ್ಲಿ ರಾಜ್ಯಸಭೆಯಲ್ಲಿ ಸೀತಾರಾಮನ್, ಡೋಕಾಲಾದ ಎರಡು ದೇಶದ ಸೇನೆಗಳು ಮುಖಾಮುಖಿಯಾದ ಪ್ರದೇಶದ ಸಮೀಪ ಚೀನಾ ಸೆಂಟ್ರಿ ಪೋಸ್ಟ್ಗಳು, ಕಂದಕ, ಹಾಗೂ ಹೆಲಿಪ್ಯಾಡ್ಗಳು ಸೇರಿದಂತೆ ಕೆಲವು ಮೂಲ ಸೌಕರ್ಯಗಳ ನಿರ್ಮಾಣದಲ್ಲಿ ತೊಡಗಿದೆ ಎಂದಿದ್ದರು. ಡೋಕಾಲಾ ಪ್ರದೇಶದಲ್ಲಿ ಟ್ಯಾಂಕ್ಗಳು ಹಾಗೂ ಮಿಸೈಲ್ಗಳು ಅಲ್ಲದೆ, 7 ಹೆಲಿಪ್ಯಾಡ್ಗಳನ್ನು ಚೀನಾ ನಿರ್ಮಿಸುತ್ತಿದೆ ಎಂಬುದನ್ನು ಉಪಗ್ರಹ ಚಿತ್ರಗಳು ಬಹಿರಂಗಪಡಿಸಲಿಲ್ಲವೇ ಎಂಬ ಪ್ರಶ್ನೆಯೊಂದಕ್ಕೆ ಸೀತಾರಾಮನ್ ಈ ಪ್ರತಿಕ್ರಿಯೆ ನೀಡಿದ್ದರು.