ಉ.ಪ್ರ. ಉಪ ಚುನಾವಣೆಯಲ್ಲಿ ಎಸ್ಪಿಗೆ ಬೆಂಬಲವಿಲ್ಲ: ಮಾಯಾವತಿ ಯೂ-ಟರ್ನ್
ಲಕ್ನೋ, ಮಾ.27: ಉತ್ತರಪ್ರದೇಶದಲ್ಲಿ ಮುಂಬರುವ ಯಾವುದೇ ಉಪ ಚುನಾವಣೆಯಲ್ಲಿ ತಮ್ಮ ಪಕ್ಷ ಸಮಾಜವಾದಿ ಪಕ್ಷಕ್ಕೆ ಬೆಂಬಲ ನೀಡುವುದಿಲ್ಲ ಎಂದು ಬಿಎಸ್ಪಿ ನಾಯಕಿ ಮಾಯಾವತಿ ಹೇಳಿದ್ದಾರೆ.
ಬಿಎಸ್ಪಿ, ಎಸ್ಪಿ ಬೆಂಬಲದ ಹೊರತಾಗಿಯೂ ರಾಜ್ಯಸಭಾ ಚುನಾವಣೆಯಲ್ಲಿ ಸೋತ ಮೂರು ದಿನಗಳ ಬಳಿಕ ಮಾಯಾವತಿ ಈ ಹೇಳಿಕೆ ನೀಡಿದ್ದಾರೆ. ತನ್ನ ಪಕ್ಷಕ್ಕೆ ಬೆಂಬಲ ನೀಡಿರುವ ಎಸ್ಪಿ ಪ್ರಯತ್ನವನ್ನು ಶ್ಲಾಘಿಸಿರುವ ಮಾಯಾವತಿ, ಬಿಎಸ್ಪಿ ಅಭ್ಯರ್ಥಿಯ ಗೆಲುವಿಗೆ ಪಕ್ಷೇತರ ಶಾಸಕ ರಘುರಾಜ್ ಪ್ರತಾಪ್ ಸಿಂಗ್ರನ್ನು ಅವಲಂಬಿಸಿದ್ದ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ರಾಜಕೀಯ ಅಪ್ರಬುದ್ಧ ಪ್ರದರ್ಶಿಸಿದ್ದಾರೆಂದು ಒತ್ತಿ ಹೇಳಿದ್ದಾರೆ. ನಾನು ಅಖಿಲೇಶ್ ಸ್ಥಾನದಲ್ಲಿದ್ದರೆ, ಬಿಸ್ಪಿ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯ ನೀಡುತ್ತಿದ್ದೆ ಎಂದು ತಿಳಿಸಿದರು.
ಎಸ್ಪಿ ಪಕ್ಷ ಇತ್ತೀಚೆಗೆ ನಡೆದ ಗೋರಖ್ಪುರ ಹಾಗೂ ಫುಲ್ಪುರ ಲೋಕಸಭಾ ಉಪ ಚುನಾವಣೆಯಲ್ಲಿ ಬಿಎಸ್ಪಿ ಬೆಂಬಲದೊಂದಿಗೆ ಬಿಜೆಪಿ ವಿರುದ್ಧ ಭರ್ಜರಿ ಜಯ ಸಾಧಿಸಿತ್ತು. ಮುಂದಿನ ದಿನಗಳಲ್ಲಿ ಬರುವ ತಲಾ ಒಂದು ಲೋಕಸಭಾ ಹಾಗೂ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಎಸ್ಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಇಂಗಿತ ವ್ಯಕ್ತಪಡಿಸಿತ್ತು. ಇದೀಗ ಬಿಎಸ್ಪಿಯ ಹೇಳಿಕೆಯಿಂದಾಗಿ 2019ರ ಲೋಕಸಭಾ ಚುನಾವಣೆಯ ತನಕ ಸ್ವತಂತ್ರವಾಗಿ ಸ್ಪರ್ಧಿಸಬೇಕಾಗಿದೆ