ವಿದ್ಯುನ್ಮಾನ ಮತಯಂತ್ರದ ಜೊತೆಗೆ ವಿವಿ ಪ್ಯಾಟ್ ಬಳಕೆ: ಮೈಸೂರು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್
ಮೈಸೂರು,ಮಾ.27: ವಿದ್ಯುನ್ಮಾನ ಮತಯಂತ್ರದ ಜೊತೆಗೆ ವಿವಿ ಪ್ಯಾಟ್ ಗಳನ್ನು ಬಳಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದರು.
ಮೈಸೂರಿನ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಸರ್ವಿಸ್ ವೋಟರ್ ಗೆ ಎಲೆಕ್ಟ್ರಾಕ್ ವೋಟ್ ಗೆ ವ್ಯವಸ್ಥೆ ಮಾಡಲಾಗುವುದು. ಪ್ರಮಾಣೀಕೃತ ಚುನಾವಣಾಧಿಕಾರಿಗಳನ್ನು ಚುನಾವಣೆಗಳಲ್ಲಿ ಬಳಸಲು ನಿರ್ಧಾರಿಸಲಾಗಿದೆ. ಚುನಾವಣೆಗೆ ಬೇಕಾಗುವ ಭದ್ರತೆಯನ್ನು ರೂಪಿಸಿಕೊಳ್ಳುತ್ತಿದ್ದೇವೆ. ಇಂದಿನಿಂದ ನೀತಿ ಸಂಹಿತೆ ಜಾರಿ ಇರುವುದರಿಂದ ಯಾವುದೇ ರೀತಿಯಲ್ಲೂ ಸರ್ಕಾರಿ ಕಾರ್ಯಕ್ರಮಗಳಿಗೆ ಜನಪ್ರತಿನಿಧಿಗಳು ಭಾಗವಹಿಸಿದಂತೆ ಸೂಚನೆ ನೀಡಲಾಗುತ್ತದೆ. ಅಭ್ಯರ್ಥಿಗಳ ಖರ್ಚುವೆಚ್ಚ ಇಂದಿನಿಂದಲೇ ಜಾರಿಯಾಗುತ್ತಿದ್ದು, ಒಬ್ಬ ಅಭ್ಯರ್ಥಿಗೆ 28 ಲಕ್ಷ ನಿಗದಿಪಡಿಸಲಾಗಿದೆ. ಸರ್ಕಾರಿ ವಾಹನಗಳನ್ನು ಇಂದೇ ವಶಕ್ಕೆ ಪಡೆಯಲಾಗುವುದು ಎಂದು ಹೇಳಿದರು.
ಸರ್ಕಾರಿ ಇಲಾಖೆ ಜಾಹೀರಾತುಗಳಿಗೂ ಇಂದೇ ಕಡಿವಾಣ ಹಾಕಲಾಗುವುದು. 24,32,338 ಮತದಾರರು ಮೈಸೂರು ಜಿಲ್ಲೆಯಲ್ಲಿದ್ದಾರೆ. ಈ ಬಾರಿ ಬ್ಯಾಲೇಟ್ ಪೇಪರ್ ನಲ್ಲಿ ಅಭ್ಯರ್ಥಿಯ ಹೆಸರಿನ ಜೊತೆ ಭಾವಚಿತ್ರ ಇರಲಿದೆ. ಪೋಲಿಂಗ್ ಬೂತ್ ಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲಾಗುವುದು. ಇವಿಎಂ ಇವಿ ಪ್ಯಾಟ್ ಬಗ್ಗೆ ಜನ ಜಾಗೃತಿ ಮೂಡಿಸುತ್ತಿದ್ದೇವೆ. 17,500 ಮಂದಿಯನ್ನು ಚುನಾವಣೆ ಅಧಿಕಾರಿಗಳನ್ನಾಗಿ ಬಳಸಿಕೊಳ್ಳಲಾಗುವುದು. ಸೆಕ್ಯೂರಿಟಿ ಮ್ಯಾನೇಜ್ ಮೆಂಟ್ ಟೀಂಗಳನ್ನು ಕೂಡ ರಚಿಸಲಾಗಿದ್ದು, ಈಗಾಗಲೇ ರೌಂಡ್ಸ್ ನಲ್ಲಿದ್ದಾರೆ. ಮತದಾರರ ಪಟ್ಟಿಯನ್ನು ಮುಂದಿನ ದಿನಗಳಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ. ಶಿವಶಂಕರ್ ಉಪಸ್ಥಿತರಿದ್ದರು.