ಲಿಂಗಾಂತರಿ ಬಟ್ಟೆ ಬಿಚ್ಚಿಸಿದ ಪೊಲೀಸರು
ತಿರುವನಂತಪುರ, ಮಾ. 27: ಕೇರಳದ ಆಲಪ್ಪುಳದ ಪೊಲೀಸ್ ಠಾಣೆಯಲ್ಲಿ ಲಿಂಗಾಂತರಿ ಒಬ್ಬರ ಬಟ್ಟೆ ಬಿಚ್ಚಿಸಿದ ಘಟನೆ ನಡೆದಿದ್ದು, ಈ ಘಟನೆಯ ಚಿತ್ರ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿ ತೀವ್ರ ಟೀಕೆಗೆ ಗುರಿಯಾಗಿದೆ.
ದುರ್ವರ್ತನೆ ತೋರಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನೂತನವಾಗಿ ರೂಪಿಸಲಾಗಿರುವ ಲಿಂಗಾಂತರಿ ನ್ಯಾಯ ಮಂಡಳಿ ಹೇಳಿದೆ.
ಲಿಂಗಾಂತರಿ ಹೋರಾಟಗಾರರ ಪ್ರಕಾರ, ಪೊಲೀಸರ ತಂಡ ಗಸ್ತು ನಡೆಸುತ್ತಿದ್ದ ಸಂದರ್ಭ ಈ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ಪೊಲೀಸ್ ಠಾಣೆಗೆ ಕರೆದೊಯ್ದಿತು. ಅವರು ಬಂದಿಖಾನೆ ಒಳಗಡೆ ಆತ್ಮಹತ್ಯೆ ಮಾಡಿಕೊಳ್ಳುವ ಭೀತಿಯಿಂದ ಪೊಲೀಸರು ಬಟ್ಟೆ ಬಿಚ್ಚಿಸಿದರು. ಆನಂತರ ಕೆಲವು ಪೊಲೀಸರು ಅವರ ಫೋಟೊ ತೆಗೆದರು. ವೀಡಿಯೊ ಮಾಡಿದರು. ಅದನ್ನು ಸಾಮಾಜಿಕ ಜಾಲ ತಾಣದಲ್ಲಿ ಅಪ್ಲೋಡ್ ಮಾಡಿದರು. ಇದು ಈಗ ವೈರಲ್ ಆಗಿದೆ.
ಈ ಘಟನೆ ಕಳೆದ ಗುರುವಾರ ಸಂಭವಿಸಿದೆ. ಈ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡವೊಂದನ್ನು ರೂಪಿಸಲಾಗಿದೆ ಎಂದು ಆಲಪ್ಪುಳ ಪೊಲೀಸ್ ಅಧೀಕ್ಷಕ ಎ. ಸುರೇಂದ್ರನ್ ಹೇಳಿದ್ದಾರೆ.