ಮಸೀದಿಯ ಮೇಲೆ ಕೇಸರಿ ಧ್ವಜ ಹಾರಿಸಿದ ದುಷ್ಕರ್ಮಿಗಳು
ಪಾಟ್ನಾ, ಮಾ.29: ಬಿಹಾರದಲ್ಲಿ ನಡೆದ ಕೋಮು ಗಲಭೆಯ ಸಂದರ್ಭ ಇಲ್ಲಿನ ಸಮಸ್ತಿಪುರದಲ್ಲಿ ದುಷ್ಕರ್ಮಿಗಳು ಮಸೀದಿಯ ಮೇಲೆ ಕೇಸರಿ ಧ್ವಜ ಹಾರಿಸಿ ಬಗ್ಗೆ ವರದಿಯಾಗಿದೆ.
ಮಂಗಳವಾರ ರ್ಯಾಲಿ ನಡೆಯುತ್ತಿದ್ದ ಸಂದರ್ಭ ದುಷ್ಕರ್ಮಿಗಳ ತಂಡವೊಂದು ಮಸೀದಿಗಳ ಮೇಲೆ ಕಲ್ಲು ತೂರಾಟ ನಡೆಸಿತು. ಇಲ್ಲಿನ ರೋಸ್ದಾ ಪಟ್ಟಣದಲ್ಲಿರುವ ಜಾಮಾ ಮಸೀದಿ ಮುಂದೆ ಜಮಾಯಿಸಿದ ಕಿಡಿಗೇಡಿಗಳು ಮಸೀದಿಯ ಮೇಲೆ ಹತ್ತಿ ಕೇಸರಿ ಧ್ವಜ ಹಾರಿಸಿದ್ದಾರೆ ಎನ್ನಲಾಗಿದೆ.
ಸಾಮಾಜಿಕ ಜಾಲತಾಣದಲ್ಲೂ ಈ ಘಟನೆಯದ್ದು ಎನ್ನಲಾದ ವಿಡಿಯೋಗಳು ವೈರಲ್ ಆಗುತ್ತಿವೆ. ಮಸೀದಿ ಮೇಲೇರುವ ಕಿಡಿಗೇಡಿಗಳು ಕೇಸರಿ ಧ್ವಜ ಹಾರಿಸುತ್ತಿರುವ ದೃಶ್ಯಗಳು ವಿಡಿಯೋದಲ್ಲಿದೆ. ಮಸೀದಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎಂದು ಸ್ಥಳೀಯರೂ ಆರೋಪಿಸಿದ್ದಾರೆ. ಪವಿತ್ರ ಕುರ್ ಆನ್ ಗೂ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ.
“ಮಂಗಳವಾರ ಬೆಳಗ್ಗೆ ಒಂದು ಸಮುದಾಯದ ಜನರು ಇಲ್ಲಿಗೆ ಆಗಮಿಸಿ ಕಾನೂನು ಸುವ್ಯವಸ್ಥೆಯನ್ನು ಹಾಳುಗೆಡವಿದ್ದಾರೆ. ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ” ಎಂದು ಎಸ್ಪಿ ದೀಪಕ್ ರಂಜನ್ ಹೇಳಿದ್ದಾರೆ.