ಎಪ್ರಿಲ್ 8ರಂದು ಜನಾಶೀರ್ವಾದ ಯಾತ್ರೆಯ ಸಮಾರೋಪ: ಡಾ.ಜಿ.ಪರಮೇಶ್ವರ್
ಬೆಂಗಳೂರು, ಮಾ.31: ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ಜನಾಶೀರ್ವಾದ ಯಾತ್ರೆಯ ಸಮಾರೋಪ ಸಮಾರಂಭವು ಎಪ್ರಿಲ್ 8ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಶನಿವಾರ ನಗರದ ಕ್ವೀನ್ಸ್ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಇದೊಂದು ಐತಿಹಾಸಿಕ ಸಮಾವೇಶವಾಗಲಿದ್ದು, ಸುಮಾರು 5 ಲಕ್ಷ ಜನರನ್ನು ಸೇರಿಸಲಾಗುವುದು ಎಂದರು.
ಗುಲ್ಬರ್ಗ, ಬೆಳಗಾವಿ ಹಾಗೂ ಮೈಸೂರು ಕಂದಾಯ ವಿಭಾಗಗಳಲ್ಲಿ ನಡೆಸಿದ ಜನಾಶೀರ್ವಾದ ಯಾತ್ರೆಯು ಯಶಸ್ವಿಯಾಗಿ ಮುಗಿದಿದ್ದು, ಬೆಂಗಳೂರಿನಲ್ಲಿ ಗ್ರಾಂಡ್ ಫಿನಾಲೆ ನಡೆಸುತ್ತಿದ್ದೇವೆ. ಅದರ ಭಾಗವಾಗಿ ಎಪ್ರಿಲ್ 3ರಂದು ರಾಹುಲ್ಗಾಂಧಿ ದಿಲ್ಲಿಯಿಂದ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ ಎಂದು ಅವರು ಹೇಳಿದರು.
ಹುಬ್ಬಳ್ಳಿಯಿಂದ ಹೆಲಿಕಾಪ್ಟರ್ ಮೂಲಕ ಶಿವಮೊಗ್ಗಕ್ಕೆ ಆಗಮಿಸಲಿರುವ ರಾಹುಲ್ಗಾಂಧಿ ಅಲ್ಲಿ ರೋಡ್ ಶೋ ನಡೆಸಲಿದ್ದಾರೆ. ಆನಂತರ ಹೊನ್ನಾಳಿ ಹಾಗೂ ಹರಿಹರದಲ್ಲಿ ರೋಡ್ ಶೋ ನಡೆಸಿದ ಬಳಿಕ ದಾವಣಗೆರೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.
ಎಪ್ರಿಲ್ 4ರಂದು ಆ ಭಾಗದ ಬ್ಲಾಕ್ ಹಾಗೂ ಜಿಲ್ಲಾಧ್ಯಕ್ಷರ ಸಭೆ ನಡೆಸಲಿದ್ದಾರೆ. ಆನಂತರ, ದಾವಣಗೆರೆಯಿಂದ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡ ಬಳಿಕ ತುಮಕೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲಿದ್ದಾರೆ ಎಂದು ಅವರು ಹೇಳಿದರು.
ಸಿದ್ಧಗಂಗಾ ಮಠದಿಂದ ಕುಣಿಗಲ್ಗೆ ತೆರಳಿ ಅಲ್ಲಿ ರೋಡ್ ಶೋ ನಡೆಸಲಿರುವ ರಾಹುಲ್ಗಾಂಧಿ, ಮಾಗಡಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆನಂತರ ಬೆಂಗಳೂರಿಗೆ ಬಂದು ದಿಲ್ಲಿಗೆ ತೆರಳಲಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.
ಎಪ್ರಿಲ್ 7ರಂದು ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ರೋಡ್ ಶೋ ನಡೆಸಲಿರುವ ರಾಹುಲ್ಗಾಂಧಿ, ಕೆಜಿಎಫ್, ಬಂಗಾರಪೇಟೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಎಪ್ರಿಲ್ 8ರಂದು ಜನಾಶೀರ್ವಾದ ಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಅವರು ಹೇಳಿದರು.
ಸಮಾರೋಪ ಸಮಾರಂಭದಲ್ಲಿ ಐದು ಲಕ್ಷ ಜನ ಸೇರುವ ನಿರೀಕ್ಷೆಯಿದೆ. ಈಗಾಗಲೆ ಸಚಿವರು, ಶಾಸಕರು, ಬಿಬಿಎಂಪಿ ಸದಸ್ಯರಿಗೆ ಸಮಾವೇಶದ ಸಿದ್ಧತೆಗಳ ಜವಾಬ್ದಾರಿ ವಹಿಸಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.
ರಾಹುಲ್ಗಾಂಧಿ ಇತರ ರಾಜಕೀಯ ಪಕ್ಷಗಳ ಅಧ್ಯಕ್ಷರಿಗೆ ಹೋಲಿಸಿದರೆ ಯುವಕರಿದ್ದಾರೆ. ದೇಶದ ಭವಿಷ್ಯದ ಕುರಿತು ಮುಂದಾಲೋಚನೆಯನ್ನು ಹೊಂದಿದ್ದಾರೆ. ಯುವ ಸಮೂಹ ಅವರ ಕಡೆ ಆಕರ್ಷಿತವಾಗುತ್ತಿದೆ. ರಾಹುಲ್ಗಾಂಧಿ ದೇಶದ ಭವಿಷ್ಯದ ನಾಯಕ ಎನ್ನುವ ಸಂದೇಶ ಸಿಗುತ್ತಿದೆ ಎಂದು ಅವರು ಹೇಳಿದರು.
ಮಾಜಿ ಸಚಿವ ಹರತಾಳು ಹಾಲಪ್ಪ ಕಾಂಗ್ರೆಸ್ ಸೇರ್ಪಡೆ ವಿಚಾರದ ಕುರಿತು ನನ್ನ ಹಂತದಲ್ಲಿ ಯಾವುದೆ ಚರ್ಚೆಯಾಗಿಲ್ಲ. ಈ ಸಂಬಂಧ ನನ್ನ ಬಳಿ ಯಾವುದೆ ಮಾಹಿತಿಯಿಲ್ಲ. ಅಂತಹ ಸಂದರ್ಭ ಬಂದರೆ ನೋಡೋಣ ಎಂದು ಪರಮೇಶ್ವರ್ ತಿಳಿಸಿದರು.
ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಕೆಲವು ಆರೋಪಿತ ನಾಯಕರು ಬಂದಿದ್ದಾರೆ ನಿಜ. ಆದರೆ, ಕಾನೂನಿನ ಚೌಕಟ್ಟಿನಲ್ಲಿ ಅವರನ್ನು ರಕ್ಷಣೆ ಮಾಡುವ ಕೆಲಸ ಮಾಡುವುದಿಲ್ಲ. ಅನೇಕ ವಿಷಯಗಳನ್ನು ಚರ್ಚಿಸಿ, ನಮ್ಮ ಸಿದ್ಧಾಂತವನ್ನು ಒಪ್ಪಿದ ನಂತರವಷ್ಟೇ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಂಗ್ರೆಸ್ ಮುಖಂಡರು, ಮಠ ಮಂದಿರ, ಮಸೀದಿಗಳಿಗೆ ಭೇಟಿ ನೀಡುತ್ತಿರುವುದನ್ನು ನೋಡಿ ಆತಂಕಗೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಮಠಗಳಿಗೆ ಭೇಟಿ ನೀಡುತ್ತಿದ್ದಾರೆ. ಬಿಜೆಪಿಯಲ್ಲಿರುವವರು ಮಾತ್ರ ಹಿಂದೂಗಳೇ, ಕಾಂಗ್ರೆಸ್ನಲ್ಲೂ ಹಿಂದೂಗಳಿದ್ದಾರೆ. ನಾವು ಮಠ, ಮಂದಿರದ ಜೊತೆಗೆ ಜನರ ಮುಂದೆಯೂ ಹೋಗುತ್ತೇವೆ ಎಂದು ಅವರು ಹೇಳಿದರು.
ಎ.12ರಂದು ಪಟ್ಟಿ ಬಿಡುಗಡೆ
ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಕೆಲ ಕ್ಷೇತ್ರಗಳಲ್ಲಿ ಸಚಿವರು, ಶಾಸಕರ ಮಕ್ಕಳು ಟಿಕೆಟ್ಗಾಗಿ ಅರ್ಜಿ ಹಾಕಿದ್ದಾರೆ. ಎಲ್ಲ ಅರ್ಜಿಗಳನ್ನು ಹೈಕಮಾಂಡ್ಗೆ ಕಳುಹಿಸಿಕೊಟ್ಟಿದ್ದೇವೆ. ಎಪ್ರಿಲ್ 10ರಂದು ನಡೆಯಲಿರುವ ಚುನಾವಣಾ ಸಮಿತಿ ಸಭೆಯಲ್ಲಿ ಟಿಕೆಟ್ಗಳನ್ನು ಅಂತಿಮಗೊಳಿಸಲಾಗುವುದು. ಎ.12ರಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ.
-ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ