ಅನಂತ್ಕುಮಾರ್ ಹೆಗಡೆಗೆ ಅವರ ಪಕ್ಷದಲ್ಲೆ ಬೆಲೆಯಿಲ್ಲ: ಶಿವಸೇನೆ ನಾಯಕ ಸುರೇಶ್ ಲಾಂಡಗೆ
ಹುಬ್ಬಳ್ಳಿ, ಎ.4: ಕೇಂದ್ರ ಸಚಿವ ಅನಂತ್ಕುಮಾರ್ ಹೆಗಡೆಗೆ ಶಿವಸೇನೆಯ ತಾಕತ್ ಏನು ಎಂಬುದು ಗೊತ್ತಿಲ್ಲ ಎಂದು ಶಿವಸೇನೆ ಉತ್ತರ ಕರ್ನಾಟಕ ಭಾಗದ ಅಧ್ಯಕ್ಷ ಸುರೇಶ್ ಲಾಂಡಗೆ ಎಚ್ಚರಿಕೆ ನೀಡಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಸೇನೆಯ ತಾಕತ್ ಬಗ್ಗೆ ಪ್ರಧಾನಿ ನರೇಂದ್ರಮೋದಿಯನ್ನು ಕೇಳಿ ಅವರು ತಿಳಿದುಕೊಳ್ಳಲಿ. ಶಿವಸೇನೆ ಬಗ್ಗೆ ಎಚ್ಚರಿಕೆಯಿಂದ ಮಾತನಾಡಬೇಕು, ಇಲ್ಲವಾದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.
ಅನಂತ್ಕುಮಾರ್ ಹೆಗಡೆಗೆ ಅವರ ಪಕ್ಷದಲ್ಲೆ ಬೆಲೆಯಿಲ್ಲ. ಆದುದರಿಂದ, ನಮ್ಮ ಬಗ್ಗೆ ಎಚ್ಚರಿಕೆಯಿಂದ ಮಾತನಾಡುವುದು ಒಳ್ಳೆಯದು. ಶಿವಸೇನೆಯನ್ನು ಒಡೆಯಲು ಬಿಜೆಪಿ ಷಡ್ಯಂತ್ರ ರೂಪಿಸಿದೆ ಎಂದು ಸುರೇಶ್ ಲಾಂಡಗೆ ಆರೋಪಿಸಿದರು.
ಗುಜರಾತ್ನ ಗೋಧ್ರಾ ಹತ್ಯಾಕಾಂಡದ ನಂತರ ಅಂದು ಮುಖ್ಯಮಂತ್ರಿಯಾಗಿದ್ದ ನರೇಂದ್ರಮೋದಿಯನ್ನು ಮುಂದುವರೆಸಲು ಶಿವಸೇನೆ ಬೆಂಬಲ ನೀಡಿತ್ತು. ನಮ್ಮ ಪಕ್ಷದ ಶಕ್ತಿ, ಸಾಮರ್ಥ್ಯ ಏನು ಎಂಬುದನ್ನು ನರೇಂದ್ರಮೋದಿ ಬಳಿ ಕೇಳಿ ತಿಳಿದು ಕೊಳ್ಳುವುದು ಒಳ್ಳೆಯದು ಎಂದು ಅವರು ಹೇಳಿದರು.