ಕೋಮುವಾದಿ ಸರಕಾರ ಸ್ಥಾಪನೆಯತ್ತ ಬಿಜೆಪಿ: ಜಿಗ್ನೇಶ್ ಮೇವಾನಿ

Update: 2018-04-05 16:15 GMT

ಸಾಗರ, ಎ.5: ಗೋವು, ಲವ್‌ಜಿಹಾದ್, ಮತಾಂತರ, ಹಿಂದುತ್ವದಂತಹ ಭಾವನಾತ್ಮಕ ವಿಷಯಗಳನ್ನು ಇರಿಸಿಕೊಂಡು ದೇಶವ್ಯಾಪಿ ಕೋಮುವಾದಿ ಸರಕಾರ ಸ್ಥಾಪನೆಯತ್ತ ಮುನ್ನುಗ್ಗುತ್ತಿರುವ ಮೋದಿ ನೇತೃತ್ವದ ಬಿಜೆಪಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಹಂತದಲ್ಲೂ ಸಂಘಟಿತ ಪ್ರಯತ್ನ ಅಗತ್ಯ ಎಂದು ಹೋರಾಟಗಾರ ಹಾಗೂ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಕರೆ ನೀಡಿದ್ದಾರೆ.

ಇಲ್ಲಿನ ಸ್ವಾತಿ ರೆಸಿಡೆನ್ಸಿ ಸಭಾಂಗಣದಲ್ಲಿ ಗುರುವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಸಂವಿಧಾನ ಉಳಿವಿಗಾಗಿ ಸ್ವಾಭಿಮಾನ ಸಮಾವೇಶದ ಅಂಗವಾಗಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ಕೇಂದ್ರದಲ್ಲಿರುವುದು ಫ್ಯಾಸಿಸ್ಟ್ ಸರಕಾರ. ಇದನ್ನು ಬುಡಸಹಿತ ಕಿತ್ತು ಹಾಕದಿದ್ದಲ್ಲಿ ನಮ್ಮ ಸಂವಿಧಾನಕ್ಕೆ ಉಳಿಗಾಲವಿಲ್ಲ ಎಂದರು.

ದೇಶದಲ್ಲಿ ನೂರಾರು ಜ್ವಲಂತ ಸಮಸ್ಯೆಗಳಿವೆ. ನಿರುದ್ಯೋಗ, ರೈತರ ಆತ್ಮಹತ್ಯೆ, ಕೃಷಿ ಕ್ಷೇತ್ರ ವೈಫಲ್ಯವಾಗುತ್ತಿರುವುದು, ಜಿಎಸ್‌ಟಿಯಿಂದಾದ ಆರ್ಥಿಕ ಅಸ್ಥಿರತೆ ಇವೆಲ್ಲವನ್ನೂ ಚರ್ಚಿಸದ ಪ್ರಧಾನಿ ನರೇಂದ್ರ ಮೋದಿ, ಹಿಂದುತ್ವದ ಅಜೆಂಡಾ ಇರಿಸಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ನಾವೆಲ್ಲ ಒಂದಾಗದೇ ಇದ್ದಲ್ಲಿ ಸಂವಿಧಾನದ ಆಶಯ ಬುಡಮೇಲಾಗುವ ಸಾಧ್ಯತೆ ಹೆಚ್ಚಿದೆ ಎಂದು ಅಭಿಪ್ರಾಯಿಸಿದರು.

ಜಾತ್ಯತೀತ ಶಕ್ತಿಗಳು ಒಗ್ಗೂಡಬೇಕು. ಬಿಜೆಪಿಯನ್ನು ಇಲ್ಲಿ ಮಣಿಸಿದ್ದೇ ಆದಲ್ಲಿ ಇತರೆ ಎಲ್ಲ ಕೋಮುವಾದಿ ಶಕ್ತಿಗಳು ಮೂಲೆಗುಂಪಾಗುತ್ತದೆ ಎಂದರು.

ಕೋಮು ಸೌಹಾರ್ದ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದಶಿರ್ ಕೆ.ಎಲ್.ಅಶೋಕ್ ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರಗತಿಪರ ಚಿಂತಕ ಎಚ್.ಬಿ.ರಾಘವೇಂದ್ರ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಹ ಸಂಚಾಲಕ ಪರಮೇಶ್ವರ ದೂಗೂರು, ಸ್ವರಾಜ್ ಅಭಿಯಾನದ ಜಿಲ್ಲಾ ಸಂಯೋಜಕ ಶಿವಾನಂದ ಕುಗ್ವೆ, ಎನ್.ಡಿ.ವಸಂತಕುಮಾರ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News