ಕೊಡವ ಮಕ್ಕಡ ಕೂಟದಿಂದ ಮಡಿಕೇರಿಯಲ್ಲಿ ಎಡ್ಮ್ಯಾರ್1 ಆಚರಣೆ
ಮಡಿಕೇರಿ,ಎ.8: ಕೊಡವ ಮಕ್ಕಡ ಕೂಟ ಮತ್ತು ಮಿನ್ನಂಡ ಕುಟುಂಬದ ಸಂಯುಕ್ತ ಆಶ್ರಯದಲ್ಲಿ ಎ.14ರ ಶನಿವಾರ ಕೊಡವ ಕ್ಯಾಲೆಂಡರ್ ನ ಮೊದಲ ದಿನವಾದ ಎಡ್ಮ್ಯಾರ್1ನ್ನು ಮಡಿಕೇರಿ ತಾಲೂಕಿನ ಕರವಲೆ ಬಾಡಗ ಗ್ರಾಮದಲ್ಲಿ ಆಚರಿಸಲಾಗುವುದೆಂದು ಕೊಡವ ಮಕ್ಕಡ ಕೂಟದ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ತಿಳಿಸಿದ್ದಾರೆ.
ಪೂರ್ವಾಹ್ನ 8ಕ್ಕೆ ಮಿನ್ನಂಡ ಕುಟುಂಬಸ್ಥರ ಮನೆಯಲ್ಲಿ ಕುಟುಂಬಸ್ಥರು ಹಾಗು ಕೊಡವ ಮಕ್ಕಡ ಪದಾಧಿಕಾರಿಗಳು, ಸದಸ್ಯರು ಸೇರಿ ದೇವನೆಲೆಯಾದ ನೆಲ್ಲಕ್ಕಿಯಲ್ಲಿ ದೇವರಿಗೆ ಅಕ್ಕಿ ಹಾಕಿ ನಮಿಸಿ ಹಿರಿಯರ ಆರ್ಶಿವಾದ ಪಡೆದು ಕುಟುಂಬದ ಭತ್ತದ ಗದ್ದೆಗೆ ತೆರಳಿ ಭೂಮಿ ತಾಯಿಗೆ ಪೂಜೆಸಲ್ಲಿಸಿ ಎತ್ತು ಕಟ್ಟಿ ಉಳುಮೆ ಮಾಡಲಾಗುವುದು. ಪೂರ್ವಾಹ್ನ 10 ಗಂಟೆಗೆ ಮಿನ್ನಂಡ ಕುಟುಂಬದ ಪಟ್ಟೆದಾರರಾದ ಮಿನ್ನಂಡ ರಾಮಪ್ಪರವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಗಂಡೇಶ್ವರ ಹಾಗು ತಲಕಾವೇರಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿದ್ದಾಟಂಡ ಎಸ್.ತಮ್ಮಯ್ಯ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘ ಹಾಗು ಪ್ರೆಸ್ ಕ್ಲಬ್ನ ಅಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ,ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ.ಬಿ.ಅಯ್ಯಪ್ಪ, ಪೊನ್ನಂಪೇಟೆಯ ಯುವ ಸಮಾಜ ಸೇವಕರಾದ ಚೆಪ್ಪುಡಿರ ರಾಕೇಶ್ ದೇವಯ್ಯರವರು ಹಾಗು ಅಲ್ಲಾರಂಡರಂಗ ಚಾವಡಿಯ ಅಧ್ಯಕ್ಷ ಅಲ್ಲಾರಂಡ ವಿಠಲನಂಜಪ್ಪನವರು ಭಾಗವಹಿಸಲಿದ್ದಾರೆ. ಎಡ್ಮ್ಯಾರ್1ರ ವಿಶೇಷತೆಯ ಬಗ್ಗೆ ವಿಚಾರ ಮಂಡನೆಯನ್ನು ಅಲ್ಲಾರಂಡ ವಿಠಲನಂಜಪ್ಪ ನೆರವೇರಿಸಲಿರುವರು.
ಕೊಡವ ಪದ್ದತಿ, ಪರಂಪರೆ, ಆಚಾರವಿಚಾರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಳೆದ 6 ವರ್ಷಗಳಿಂದ ಕೊಡವ ಮಕ್ಕಡ ಕೂಟವು ಕೊಡಗಿನ ಹಲವು ಗ್ರಾಮಗಳಲ್ಲಿ ಎ.14ರಂದು ಎಡ್ಮ್ಯಾರ್1ನ್ನು ಆರಿಸಿಕೊಂಡು ಬರುತ್ತಿದ್ದು, ಕೊಡಗಿನಲ್ಲಿ ಮರೆಯಾಗುತ್ತಿರುವ ಉಳುಮೆ ಪದ್ಧತಿಯನ್ನು ಉಳಿಸಿಬೆಳೆಸಲು ಪ್ರೋತ್ಸಾಹಿಸಿವುದಾಗಿದೆಂದು ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಹೇಳುತ್ತಾರೆ.