ಮೈಸೂರು: ಸೆಕ್ಯೂರಿಟಿ ಗಾರ್ಡ್ ಕೊಲೆ ಪ್ರಕರಣ; ಮೂವರ ಬಂಧನ
ಮೈಸೂರು,ಎ.9: ಸೆಕ್ಯೂರಿಟಿ ಗಾರ್ಡ್ ಓರ್ವರ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ದುಷ್ಕರ್ಮಿಗಳು ಕಲ್ಲೆತ್ತಿ ಹಾಕಿ ಕೊಲೆಗೈದ ಘಟನೆ ಮಾ.26ರಂದು ರಾತ್ರಿ ರೈಲ್ವೆ ಕಾಲೋನಿಯಲ್ಲಿ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ರೈಲ್ವೆ ಕಾಲೋನಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯ ಸೆಕ್ಯೂರಿಟಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹೂಟಗಳ್ಳಿ ನಿವಾಸಿ ರಾಜ ಶೆಟ್ಟಿ(53)ಎಂಬವರ ತಲೆಯ ಮೇಲೆ ಕಲ್ಲು ಹಾಕಿ ದುಷ್ಕರ್ಮಿಗಳು ಕೊಲೆಗೈದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವರಾಜ ಮೊಹಲ್ಲಾ ಸಂತೇಪೇಟೆ ನಿವಾಸಿ ದಿನೇಶ್ ಅಲಿಯಾಸ್ ನೇಪಾಳ ಬಿನ್ ಮೋಹನ್ ಸಿಂಗ್(35),ಗೌಸಿಯಾನಗರದ ಸಲ್ಮಾನ ಖಾನ್ ಅಲಿಯಾಸ್ ಒಳ್ಳೆ ಬಿನ್ ಲೇಟ್ ಯಾಸಿನ್(20), ಪಾಂಡವಪುರ ಹಾರೋಹಳ್ಳಿ ಗ್ರಾಮದ ರಾಜ ಬಿನ್ ಮಾದೇಗೌಡ(26) ಎಂಬ ಮೂವರನ್ನು ಬಂಧಿಸಲಾಗಿದೆ.
ಕಳ್ಳತನಕ್ಕೆ ಯತ್ನಿಸುವ ಸಲುವಾಗಿ ಸೆಕ್ಯುರಿಟಿ ಗಾರ್ಡ್ನನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾರೆ. ಇವರು ಕಳ್ಳತನಕ್ಕೆ ಹೊಂಚು ಹಾಕಿ ಮನೆಯೊಂದರ ಮುಂದೆ ಕುಳಿತಿದ್ದರು. ರಾತ್ರಿ ಪಾಳಿಯ ಪೊಲೀಸರು ಅನುಮಾನದಿಂದ ಹತ್ತಿರ ಹೋಗಿ ವಿಚಾರಿಸಿದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ತಕ್ಷಣ ಇವರನ್ನು ಹಿಡಿದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇವರು ಬೇರೆ, ಬೇರೆ ಪ್ರಕರಣಗಳಲ್ಲಿಯೂ ಗುರುತಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದು, ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.