ಸರಕಾರ ಬೀಳಿಸುವುದಷ್ಟೇ ರಮೇಶ್ ಜಾರಕಿಹೊಳಿ ತಲೆಯಲ್ಲಿದೆ: ಸಚಿವ ಸತೀಶ್ ಜಾರಕಿಹೊಳಿ
Update: 2019-07-13 12:24 GMT
ಬೆಳಗಾವಿ, ಜು.13: ಶಾಸಕ ರಮೇಶ್ ಜಾರಕಿಹೊಳಿಗೆ ಯಾವುದೇ ಪದವಿ ಬೇಡವಾಗಿದ್ದು, ಕೇವಲ ಸರಕಾರ ಬೀಳಿಸುವುದಷ್ಟೇ ಅವರ ತಲೆಯಲ್ಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಸಭೆಗಳಲ್ಲಿ ಈಗಾಗಲೇ ಹೇಳಿದ್ದು, ರಮೇಶ್ ಪಕ್ಷಕ್ಕೆ ವಾಪಸ್ಸು ಬರುವುದಿಲ್ಲ. ಅಷ್ಟೇ ಅಲ್ಲದೆ, ಅವರಿಗೆ ಪ್ರಧಾನಿ ಹುದ್ದೆ ನೀಡಿದರೂ, ಮೈತ್ರಿ ಸರಕಾರ ಅಸ್ಥಿರಗೊಳಿಸುವ ಪ್ರಯತ್ನ ನಿಲ್ಲಿಸುವುದಿಲ್ಲ ಎಂದು ಆರೋಪಿಸಿದರು.
ಸಮ್ಮಿಶ್ರ ಸರಕಾರದ ಅಸ್ಥಿರತೆಗೆ ಬಿಜೆಪಿ ಹಿಂದಿನಿಂದ ಕೆಲಸ ಮಾಡುತ್ತಿದೆ. ಶಾಸಕರ ರಾಜೀನಾಮೆಗಾಗಿ ಹಣ ಖರ್ಚು ಮಾಡಿ ಮುಂಬೈಗೆ ಕಳುಹಿಸಲಾಗಿದೆ ಎಂದ ಅವರು, ರಾಜ್ಯ ರಾಜಕಾರಣದಲ್ಲಿ ಈ ರೀತಿ ಬದಲಾವಣೆಯಾಗಲು ಬೆಳಗಾವಿ ಮೂಲ ಕಾರಣ. ಇಲ್ಲಿಂದಲೇ ಅನೇಕ ಬೆಳವಣಿಗೆಗಳು ನಡೆದವು ಎಂದರು.