ನಟ ದುನಿಯಾ ವಿಜಯ್ ಮೇಲೆ ಹಲ್ಲೆ ಪ್ರಕರಣ: ಪಾನಿಪುರಿ ಕಿಟ್ಟಿ ವಿರುದ್ಧದ ಪ್ರಕರಣ ರದ್ದು
ಬೆಂಗಳೂರು, ಜು.24: ನಟ ದುನಿಯಾ ವಿಜಯ್ ಹಾಗೂ ಅವರ ಪುತ್ರ ಸಾಮ್ರಾಟ್ಗೆ ಜೀವ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಜಿಮ್ ತರಬೇತುದಾರ ಕೃಷ್ಣಮೂರ್ತಿ(ಪಾನಿಪುರಿ ಕಿಟ್ಟಿ) ಹಾಗೂ ಅವರ ಅಣ್ಣನ ಮಗ ಪಿ.ಮಾರುತಿಗೌಡ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶಿಸಿದೆ.
ಪ್ರಕರಣ ರದ್ದುಕೋರಿ ಕೃಷ್ಣಮೂರ್ತಿ ಹಾಗೂ ಪಿ.ಮಾರುತಿಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್.ದಿನೇಶ್ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ. ಕಾನೂನಿಗೆ ಬೆಲೆ ಕೊಟ್ಟು ಪೊಲೀಸರ ಮಾತಿಗೆ ಗೌರವ ಕೊಟ್ಟು ಮಾರುತಿ ಎಂಬುವವರನ್ನು ಠಾಣೆಯ ಬಳಿ ಕರೆದುಕೊಂಡು ಬಂದಾಗ, ನನ್ನನ್ನು ಅಡ್ಡಗಟ್ಟಿ ಪಾನಿಪುರಿ ಕಿಟ್ಟಿ ಮತ್ತು ಮಾರುತಿಗೌಡ ನಿನ್ನನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆಯೊಡ್ಡಿದ್ದಾರೆ. ಠಾಣೆ ಬಳಿ ಬಂದಾಗ ನನಗೆ ಡಿಚ್ಚಿ ಹೊಡೆದಿದ್ದಾನೆ ಎಂದು ಆರೋಪಿಸಿ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ರದ್ದುಕೋರಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.