130ಕೋ. ರೂ. ವೆಚ್ಚದಲ್ಲಿ ತುಂಗಾ ನದಿ ತೀರ ಅಭಿವೃದ್ಧಿ: ಮನಪಾ ಆಯುಕ್ತೆ ಚಾರುಲತಾ ಸೋಮಲ್

Update: 2019-07-25 18:24 GMT

ಶಿವಮೊಗ್ಗ, ಜು. 25: ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ತುಂಗಾ ನದಿ ತೀರವನ್ನು ಸುಮಾರು 130 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪ ಡಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ 15ದಿನಗಳ ಒಳಗಾಗಿ ಕಾರ್ಯಾದೇಶ ನೀಡಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಹೇಳಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವವೊಗ್ಗ ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ಈ ಯೋಜನೆಯಡಿ ತುಂಗಾ ನದಿಯ ಹಳೆಯ ಸೇತುವೆಯಿಂದ ಆರಂಭಿಸಿ ಹೊಸ ಸೇತುವೆವರೆಗಿನ 2.6ಕಿ.ಮೀ. ಪ್ರದೇಶದ 6.5 ಹೆಕ್ಟೇರ್ ವ್ಯಾಪ್ತಿಯಲ್ಲಿ ನಾಗರಿಕರಿಗೆ ಅನುಕೂಲವಾಗುವಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಇಲ್ಲಿ ವಿವಿಧ ಕ್ರೀಡಾ ಚಟುವಟಿಕೆಗಳು, ವಾಕಿಂಗ್ ಟ್ರಾಕ್‌ಗಳು, ಕಮರ್ಷಿಯಲ್ ಪ್ಲಾಜಾಗಳು, ಸೈಕಲ್ ಟ್ರಾಕ್, ಫುಟ್ಪಾತ್, ಮಾಹಿತಿ ಕೇಂ್ರ, ಜೆಟ್ಟಿಗಳು, ಗಣಪತಿ ವಿಸರ್ಜನೆಗೆ ಕೆರೆ ನಿರ್ಮಾಣ ಸೇರಿದಂತೆ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಯೋಜನೆ ಇದಾಗಿದೆ. ಇದಲ್ಲದೆ, ಬಯಲು ರಂಗಮಂದಿರ, ವೀಕ್ಷಣಾ ಗೋಪುರ, ಮಕ್ಕಳಿಗೆ ಆಟವಾಡುವ ತಾಣಗಳು, ಉದ್ಯಾನವನ, ಶಿವಮೊಗ್ಗ ನಗರದ ಇತಿಹಾಸವನ್ನು ಬಿಂಬಿಸುವ ಮ್ಯೂರಲ್ ಪೈಂಟಿಂಗ್ಗಳು, ಲೈಟಿಂಗ್, ಕ್ರಾಸಿಂಗ್ ಬ್ರಿಡ್ಜ್, ಜಿಮ್ ಸೌಲಭ್ಯ ಒದಗಿಸಲಾಗುವುದು. ಹಲವು ಪ್ರಸಿದ್ಧ ನಗರಗಳಲ್ಲಿ ನದಿ ದಂಡೆಯನ್ನು ಅಭಿವೃದ್ಧಿಪಡಿಸಿದ ಮಾದರಿಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

ಇನ್ನುಳಿದಂತೆ ಖಾಸಗಿ ಬಸ್ ನಿಲ್ದಾಣ ಅಭಿವೃದ್ಧಿ, 100 ಇ-ರಿಕ್ಷಾ ಖರೀದಿ, ಡಿಜಿಟಲ್ ಡಿಸ್ಪ್ಲೇ ಬೋರ್ಡ್ ಗಳ ಅಳವಡಿಕೆ, 17 ಉದ್ಯಾನವನಗಳ ಅಭಿವೃದ್ಧಿ, 35ಸರಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಎಜುಕೇಶನ್ ಸೌಲಭ್ಯ, ಬೈಕ್ ಶೇರಿಂಗ್ ಸೌಲಭ್ಯ, ಕನ್ಸರ್ವೆನ್ಸಿಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಒಟ್ಟು 120 ಕೋಟಿ ರೂ. ವೆಚ್ಚದಲ್ಲಿ 11 ಕಾಮಗಾರಿಗಳ ಅನುಷ್ಠಾನ ಅಂತಿಮ ಹಂತದಲ್ಲಿವೆ. ಬಹು ಮಹಡಿ ವಾಹನ ಪಾರ್ಕಿಂಗ್, ನೆಹರೂ ಸ್ಟೇಡಿಯಂನಲ್ಲಿ ಅಭಿವೃದ್ಧಿ ಕಾಮಗಾರಿಗಳು, ಸ್ಮಾರ್ಟ್ ಬಸ್ ಶೆಲ್ಟರ್ ನಿರ್ಮಾಣ ಕಾಮಗಾರಿ ಪ್ರಸ್ತಾವನೆಗಳು ಡಿಪಿಆರ್ ಹಂತದಲ್ಲಿವೆ ಎಂದು ಹೇಳಿದರು.

ಡಿಜಿಟಲ್ ಲೈಬ್ರರಿ: ನಗರದ ಪ್ರಮುಖ ಶಾಲಾ ಕಾಲೇಜುಗಳಲ್ಲಿ ಹಾಗೂ ಗ್ರಂಥಾಲಯಗಳಲ್ಲಿ ಡಿಜಿಟಲ್ ಲೈಬ್ರರಿ ಮತ್ತು ವರ್ಚುವಲ್ ಲೈಬ್ರರಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಮಾಹಿತಿಯನ್ನು ವಿದ್ಯಾರ್ಥಿಗಳು ಮಾತ್ರವಲ್ಲದೆ ಸಾರ್ವಜನಿಕರು ಇದರಿಂದ ಸುಲಭವಾಗಿ ಪಡೆಯಲು ಸಾಧ್ಯವಾಗಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಸೂಪರಿಂಟೆಂಡೆಂಟ್ ಇಂಜಿನಿಯರ್ ಪರಸಪ್ಪ ಬಸಪ್ಪ, ಎಕ್ಸಿಕ್ಯೂಟಿವ್ ಇಂಜಿನಿಯರ್ ಗಣೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News