ಸಂತ್ರಸ್ತರ ಮೇಲೆ ಲಾಠಿ ಪ್ರಹಾರ: ಮಾರುತಿ ಮಾನ್ಪಡೆ ಕಿಡಿ
ಕಲಬುರಗಿ, ಆ.11: ಪ್ರವಾಹ ಸಂತ್ರಸ್ಥರ ಮೇಲೆ ಲಾಠಿ ಪ್ರಹಾರ ಮಾಡುವುದನ್ನು ಬಿಟ್ಟು, ಅವರೊಂದಿಗೆ ಸರಕಾರ ಸಂಯಮದಿಂದ ವರ್ತಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಆಗ್ರಹಿಸಿದ್ದಾರೆ.
ರವಿವಾರ ಕಲಬುರಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲುಂಟಾದ ಪ್ರವಾಹದಿಂದ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿ ಜನ ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಆದರೆ, ಈ ಸಮಯದಲ್ಲಿ ಜನರ ಮೇಲೆ ಲಾಠಿ ಪ್ರಹಾರ ಮಾಡೋದು ಸರಿಯಲ್ಲ. ಬಿಜೆಪಿ ಸರಕಾರ ರೈತ ವಿರೋಧಿ, ಜನವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದರು.
ಸಿಎಂ ಯಡಿಯೂರಪ್ಪ ಬದಲಾಗಿರುವುದಾಗಿ ಹೇಳುತ್ತಾರೆ. ಆದರೆ, ಅವರು ರೈತ ವಿರೋಧಿ ನೀತಿ ಬಿಟ್ಟಿಲ್ಲ ಎಂದು ಕಿಡಿಕಾರಿದ ಅವರು, ಸರಕಾರ ಕೂಡಲೇ ನೆರೆ ಸಂತ್ರಸ್ಥರ ನೆರವಿಗೆ ಧಾವಿಸಬೇಕೆಂದು ಒತ್ತಾಯಿಸಿದರು. ಬಿ.ಎಸ್.ಯಡಿಯೂರಪ್ಪ ಅವರು ಪ್ರವಾಹ ಪೀಡಿತ ಜಿಲ್ಲೆಯಾದ ಗದಗಿನ ಕೊಣ್ಣೂರಿಗೆ ಭೇಟಿ ನೀಡಿದಾಗ ಪೊಲೀಸರು ಸಂತ್ರಸ್ತರ ಮೇಲೆ ಲಾಠಿ ಪ್ರಹಾರ ನಡೆಸಿದ್ದರು.