ಭಾರಿ ಮಳೆ, ನೆರೆಹಾವಳಿ: ವಿದ್ಯುತ್ ಸಂಪರ್ಕ ಕಲ್ಪಿಸಲು ಬೆಸ್ಕಾಂ ಸಜ್ಜು
ಬೆಂಗಳೂರು, ಆ.19: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ ಹಾನಿಗೊಳಗಾದ ವಿದ್ಯುತ್ ಕಂಬಗಳು, ತಂತಿಗಳು ಮತ್ತು ಪರಿವರ್ತಕಗಳನ್ನು ತ್ವರಿತವಾಗಿ ದುರಸ್ಥಿಗೊಳಿಸಿ ವಿದ್ಯುತ್ ಸರಬರಾಜನ್ನು ಮರುಕಲ್ಪಿಸುವ ನಿಟ್ಟಿನಲ್ಲಿ ಬೆಸ್ಕಾಂ ಪಡೆ ಕಾರ್ಯ ನಿರ್ವಹಿಸುತ್ತಿದೆ.
ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಭಾರಿ ಮಳೆ ಮತ್ತು ನೆರೆಹಾವಳಿಯಿಂದಾಗಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ (ಹೆಸ್ಕಾಂ) ವ್ಯಾಪ್ತಿಯಲ್ಲಿ ಹಾನಿಗೊಳಗಾದ ವಿದ್ಯುತ್ ಮೂಲಭೂತ ಸೌಲಭ್ಯಗಳನ್ನು ತುರ್ತಾಗಿ ಸರಿಪಡಿಸಿ ವಿದ್ಯುತ್ ಸಂಪರ್ಕವನ್ನು ಮರು ಕಲ್ಪಿಸುವ ಕಾರ್ಯಕ್ಕೆ ನೆರವಾಗಲು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯು (ಬೆಸ್ಕಾಂ) ನೆರವಿನ ಹಸ್ತ ಚಾಚಿದ್ದು, ಈ ನಿಟ್ಟಿನಲ್ಲಿ 4 ಜನ ಇಂಜಿನಿಯರ್ ಮತ್ತು 50 ಪವರ್ ಮೆನ್ಗಳ ತಂಡವೊಂದನ್ನು ನಿನ್ನೆ ಕಳುಹಿಸಿಕೊಟ್ಟಿದೆ.
ಹೆಸ್ಕಾಂ ಸಂಸ್ಥೆಯ ಕೋರಿಕೆಗೆ ಸ್ಪಂದಿಸಿ ಕಳುಹಿಸಲಾಗಿರುವ ಬೆಸ್ಕಾಂ ತಂಡವು ಮುಂದಿನ ಎರಡು ವಾರಗಳ ಕಾಲ ವಿದ್ಯುತ್ ಮೂಲ ಸೌಲಭ್ಯಗಳ ದುರಸ್ಥಿ ಮತ್ತು ವಿದ್ಯುತ್ ಸಂಪರ್ಕಕಲ್ಪಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದೆ.