ಮೋದಿಗೆ ನೆರೆ ನಿರಾಶ್ರಿತರಿಗಿಂತ ಟ್ರಂಪ್ ಗೆಲುವು ಮುಖ್ಯವಾಗಿದೆ: ಮಾಜಿ ಸಚಿವ ಆರ್.ಬಿ.ತಿಮ್ಮಾಪುರ್
ಬಾಗಲಕೋಟೆ, ಸೆ.23: ಪ್ರಧಾನಿ ನರೇಂದ್ರ ಮೋದಿಗೆ ನೆರೆ ಹಾವಳಿಗೆ ಸಿಲುಕಿ ಸಂಕಷ್ಟ ಎದುರಿಸುತ್ತಿರುವ ಉತ್ತರ ಕರ್ನಾಟಕದ ಜನತೆಗಿಂತ ಅಮೆರಿಕಾದ ಅಧ್ಯಕ್ಷ ಟ್ರಂಪ್ನ್ನು ಗೆಲ್ಲಿಸುವುದೇ ಮುಖ್ಯವಾಗಿದೆ ಎಂದು ಮಾಜಿ ಸಚಿವ ಆರ್.ಬಿ.ತಿಮ್ಮಾಪುರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಿಗೆ ಹಾಗೂ ಸಂತ್ರಸ್ತರಿಗೆ ಇನ್ನೂ ಪರಿಹಾರ ಘೋಷಿಸದೇ ಇರುವುದು ನೋವಿನ ಸಂಗತಿ. ದೇಶದ ಆರ್ಥಿಕ ಸ್ಥಿತಿ ಅಧೋಗತಿಗೆ ಹೋಗಿದೆ. ಆದರೆ, ಟ್ರಂಪ್ ಗೆಲ್ಲಿಸಲು ನರೇಂದ್ರ ಮೋದಿ ಅಮೆರಿಕಾಗೆ ಹೋಗಿದ್ದಾರೆ ಎಂದರು.
ರಾಜ್ಯ ಹಾಗೂ ಕೇಂದ್ರ ಸರಕಾರ ನೆರೆ ಪರಿಹಾರದಲ್ಲಿ ನಿಷ್ಕಾಳಜಿ ವಹಿಸಿವೆ. ನೆರೆ ಸಂತ್ರಸ್ತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಮನೆ, ಮಠ ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರು ಕಾಲ ಕಳೆಯುತ್ತಿರುವುದು ನೋವಿನ ವಿಚಾರ. ತುರ್ತು ಪರಿಹಾರ ನೀಡಿರುವ 10 ಸಾವಿರ ರೂ. ಪರಿಹಾರದ ಸರ್ವೆ ಕಾರ್ಯವನ್ನೇ ಸರಕಾರ ಇನ್ನೂ ಮುಗಿಸಿಲ್ಲ. ಜನತೆಗೆ ಸಹಾಯ ಮಾಡುವುದನ್ನು ಬಿಟ್ಟು, ಸರಕಾರ ಕಾಟಾಚಾರಕ್ಕೆ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರಕಾರ ರಾಜ್ಯದ ಮೇಲೆ ಮಲತಾಯಿ ಧೋರಣೆ ತಾಳಿದೆ. ಉತ್ತರ ಕರ್ನಾಟಕಕ್ಕೆ ಇಬ್ಬರು ಡಿಸಿಎಂಗಳು ಬಂದರು, ನಮ್ಮ ಭಾಗ್ಯ ತೆರೆಯುತ್ತದೆ ಅಂದುಕೊಂಡೆವು. ಭಾಗ್ಯದ ಬಾಗಿಲೇ ಬಂದ್ ಆಗಿದೆ. ಮುಧೋಳಕ್ಕೆ ಬಂದು ನೋಡಿದರೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ತಿಳಿಯುತ್ತದೆ. ಸಂತ್ರಸ್ತರ ಮಕ್ಕಳು ಬೀದಿಯಲ್ಲಿ ಕುಳಿತು ಓದುತ್ತಿದ್ದಾರೆ ಎಂದು ಅವರು ತಿಳಿಸಿದರು.
ಕೇಂದ್ರ ಸರಕಾರ ಐಟಿ, ಇಡಿ ಬಳಸಿಕೊಂಡು ಕಾಂಗ್ರೆಸ್ನ್ನು ಮುಗಿಸಲು ಮುಂದಾಗಿದೆ. ನೀವು ಒಬ್ಬರನ್ನು ಮುಗಿಸಿದರೆ, ಸಾವಿರಾರು ಕಾರ್ಯಕರ್ತರು ಕಾಂಗ್ರೆಸ್ನಲ್ಲಿ ಹುಟ್ಟಿಕೊಳ್ಳುತ್ತಾರೆ. ಇದಕ್ಕೆಲ್ಲಾ ಪ್ರತಿಕಾರದ ಶಿಕ್ಷೆಯನ್ನು ಒಂದಲ್ಲಾ ಒಂದು ದಿನ ಅನುಭವಿಸುತ್ತೀರ ಎಂದು ಅವರು ಪ್ರಧಾನಿ ಮೋದಿಗೆ ಎಚ್ಚರಿಸಿದರು.
ಈ ಹಿಂದೆಯೂ ಯಡಿಯೂರಪ್ಪ ಅನೈತಿಕವಾಗಿಯೇ ಅಧಿಕಾರಕ್ಕೆ ಏರಿದ್ದರು. ಈಗಲೂ ಅನೈತಿಕತೆಯಿಂದಲೇ ಅಧಿಕಾರ ವಹಿಸಿಕೊಂಡಿದ್ದಾರೆ. ಯಡಿಯೂರಪ್ಪ ಕೈಯಲ್ಲಿ ಏನೂ ಇಲ್ಲ. ಗುಜರಾತಿಗಳು ಬಿ.ಎಸ್.ಯಡಿಯೂರಪ್ಪರನ್ನು ಹಾಗೂ ಅವರ ಸಚಿವರು ಏನು ಮಾಡುತ್ತಿದಾರೆ ಎಂದು ನೋಡುತ್ತಿದ್ದಾರೆ. ಹೀಗೆ ಮಾಡುವುದಾದರೆ ನೀವೇ (ಗುಜಾರಾತಿಗಳು) ಇಲ್ಲಿ ಬಂದು ಅಧಿಕಾರ ನಡೆಸಬಹುದು. ಯಡಿಯೂರಪ್ಪ ಅವರಂತಹ ಅಸಹಾಯಕ ಮುಖ್ಯಮಂತ್ರಿ ರಾಜ್ಯಕ್ಕೆ ಸಿಕ್ಕಿದ್ದು ಇದೇ ಮೊದಲು.
-ಆರ್.ಬಿ.ತಿಮ್ಮಾಪುರ್, ಮಾಜಿ ಸಚಿವ