ಮೈಸೂರು ದಸರಾ ಪ್ರಯುಕ್ತ ಅ.1 ರಿಂದ ಜೆ.ಕೆ.ಮೈದಾನದಲ್ಲಿ 'ರೈತ ದಸರಾ'

Update: 2019-09-25 17:27 GMT

ಮೈಸೂರು,ಸೆ.25: ಮೈಸೂರು ದಸರಾ ಮಹೋತ್ಸವ ಪ್ರಯುಕ್ತ ಅಕ್ಟೋಬರ್ 1ರಿಂದ ಮೂರು ದಿನಗಳ ಕಾಲ ಜೆ.ಕೆ.ಮೈದಾನದಲ್ಲಿ ರೈತ ದಸರಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ರೈತ ದಸರಾ ಉಪ ಸಮಿತಿ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಂ.ಕೃಷ್ಣಂ ರಾಜು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ರೈತರಿಗೆ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಕೆಸರು ಗದ್ದೆ ಓಟ ಸ್ಪರ್ಧೆ,  ಗೋಣಿ ಚೀಲದ ಒಳಗೆ ಕಾಲಿಟ್ಟು ಓಡುವುದು,ಗೊಬ್ಬರ ಮೂಟೆ ಹೊತ್ತು ಓಡುವ ಸ್ಪರ್ಧೆ ,ಮೂರು ಕಾಲಿನ ಓಟ, ಗುಂಡು ಎತ್ತು ಸ್ಪರ್ಧೆಗಳನ್ನು ಪುರುಷರಿಗೆ ಆಯೋಜಿಸಲಾಗಿದೆ.

ಮಹಿಳಾ ರೈತರಿಗೆ ಚಮಚದ ಮೇಲೆ ನಿಂಬೆಹಣ್ಣು ಇಟ್ಟುಕೊಂಡು ಓಡುವ ಸ್ಪರ್ಧೆ, ನೀರಿನ ಬಿಂದಿಗೆ ಹೊತ್ತು ಓಡುವ ಸ್ಪರ್ಧೆ, ಗೋಣಿ ಚೀಲದ ಒಳಗೆ ಕಾಲಿಟ್ಟು ಓಡುವುದು, ನೀರು ತುಂಬಿದ ಮೂರು ಮಡಿಕೆ ಹೊತ್ತು ನಡೆಯುವ ಸ್ಪರ್ಧೆ, ಒಂಟಿ ಕಾಲಿನ ಓಟ ಸೇರಿದಂತೆ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು.

ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ಇದೆ ಮೈದಾನದಲ್ಲಿ ಮತ್ಸ್ಯ ಮೇಳವನ್ನೂ ಆಯೋಜಿಸಲಾಗಿದೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News