ಕೈದಿಗಳಿಗೆ ಕಲ್ಪಿಸಿರುವ ಸೌಲಭ್ಯಗಳ ವರದಿ ನೀಡಿ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ
Update: 2019-09-30 17:18 GMT
ಬೆಂಗಳೂರು, ಸೆ.30: ರಾಜ್ಯದ ಎಲ್ಲ ಕೇಂದ್ರ, ಜಿಲ್ಲಾ ಹಾಗೂ ತಾಲ್ಲೂಕು ಕಾರಾಗೃಹಗಳಲ್ಲಿ ಎಷ್ಟು ಮಂದಿ ಕೈದಿಗಳಿದ್ದಾರೆ, ಅವರಿಗೆ ಕಲ್ಪಿಸಿರುವ ಸೌಲಭ್ಯಗಳ ಕುರಿತು ನ.22ರೊಳಗೆ ವರದಿ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.
ಸುಪ್ರೀಂಕೋರ್ಟ್ 2017ರಲ್ಲಿ ನೀಡಿರುವ ತೀರ್ಪು ಹಿನ್ನೆಲೆಯಲ್ಲಿ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಸರಕಾರಿ ವಕೀಲರು ಸಲ್ಲಿಸಿದ ಅನುಪಾಲನಾ ವರದಿ ಪರಿಶೀಲಿಸಿದ ನ್ಯಾಯಪೀಠ, ರಾಜ್ಯದ 9 ಕೇಂದ್ರ ಕಾರಾಗೃಹ, 20 ಜಿಲ್ಲಾ ಹಾಗೂ 29 ತಾಲ್ಲೂಕು ಕಾರಾಗೃಹಗಳಲ್ಲಿನ ವ್ಯವಸ್ಥೆ ಹಾಗೂ ಸೌಲಭ್ಯಗಳ ವರದಿ ಜೊತೆ ಜು.4ರಂದು ನೀಡಿರುವ ಆದೇಶವನ್ನೂ ಸಲ್ಲಿಸಬೇಕೆಂದು ನಿರ್ದೇಶನ ನೀಡಿ ವಿಚಾರಣೆಯನ್ನು ನ.26ಕ್ಕೆ ಮುಂದೂಡಿತು.