ಸಾಮೂಹಿಕ ದಾವೆ ಹೂಡುತ್ತೇವೆ: ಅನಿಲ್ ಅಂಬಾನಿ ಸಮೂಹಕ್ಕೆ ಶೇರುದಾರರ ಬೆದರಿಕೆ
ಮುಂಬೈ, ಅ. 1: ನಿರಂತರ ಕಳಪೆ ನಿರ್ವಹಣೆಯಿಂದ ಶೇರು ಮಾರುಕಟ್ಟೆಯಲ್ಲಿ ನಿರಂತರ ಮೌಲ್ಯ ಕುಸಿಯುತ್ತಿರುವುದರಿಂದಾಗಿ ಸಂಪತ್ತು ಕಳೆದುಕೊಳ್ಳುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಶೇರುದಾರರು ಅನಿಲ್ ಅಂಬಾನಿ ಕಂಪೆನಿ ಸಮೂಹದ ವಿರುದ್ಧ ಸಾಮೂಹಿಕ ದಾವೆ ಹೂಡುವುದಾಗಿ ಬೆದರಿಕೆ ಒಡ್ಡಿದ್ದಾರೆ.
ಮುಂಬೈಯಲ್ಲಿ ಸೋಮವಾರ ನಡೆದ ರಿಲಯನ್ಸ್ ಪವರ್ನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಶೇರುದಾರರು, ತಾವು ಎತ್ತಿದ ಸಮಸ್ಯೆಗಳಿಗೆ ಮುಂದಿನ ಎರಡು-ಮೂರು ತಿಂಗಳ ಒಳಗೆ ಪರಿಹರಿಸದೇ ಇದ್ದಲ್ಲಿ ಕಂಪೆನಿ ಸಮೂಹದ ವಿರುದ್ಧ ಸಾಮೂಹಿಕ ದೇಶದ ಮೊದಲ ಸಾಮೂಹಿಕ ದಾವೆ ಹೂಡುವ ಮೂಲಕ ಚರಿತ್ರೆ ಸೃಷ್ಟಿಸಲಿದ್ದೇವೆ ಎಂದು ಎಚ್ಚರಿಸಿದ್ದಾರೆ.
ರಿಲಾಯನ್ಸ್ ಸಮೂಹದ 7 ಕಂಪೆನಿಗಳಲ್ಲಿ ಮೂರರಲ್ಲಿ 3 ಕೋಟಿ ರೂಪಾಯಿ ಕೇಳಿ ಹೂಡಿಕೆ ಮಾಡಿ ಶೇ. 90ರಷ್ಟು ಕಳೆದುಕೊಂಡೆ ಎಂದು ನಗರದ ಕಾರ್ಪೋರೇಟ್ ವಕೀಲರು ಆಗಿರುವ ಶೇರುದಾರರೊಬ್ಬರು ಹೇಳಿದ್ದಾರೆ. ಕಂಪೆನಿಯ ಶೇ. 80ಕ್ಕೂ ಅಧಿಕ ಶೇರುಗಳನ್ನು ಸಮೂಹದ ಅಧ್ಯಕ್ಷ ಅನಿಲ್ ಅಂಬಾನಿ ಅಡಮಾನ ಇಟ್ಟಿರುವುದನ್ನು ಅವರು ಖಂಡಿಸಿದ್ದಾರೆ. ಶೇ. 10 ಶೇರುದಾರರನ್ನು ಸಂಘಟಿಸಿ ಸಮೂಹದ ವಿರುದ್ಧ ದೇಶದಲ್ಲೇ ಮೊದಲ ಭಾರಿಗೆ ಸಾಮೂಹಿಕ ದಾವೆ ದಾಖಲಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಕಂಪೆನಿ ಕಾಯ್ದೆ 2013ರಲ್ಲಿ ಕಂಪೆನಿಗಳ ವಿರುದ್ಧ ಸಾಮೂಹಿಕ ದಾವೆ ಹೂಡುವ ಕಲಂ ಇದೆ. ಆದರೆ, ಈ ನಿಯಮದ ಅಡಿಯಲ್ಲಿ ಭಾರತದಲ್ಲಿ ಇದುವರೆಗೆ ಯಾರು ಕೂಡ ದಾವೆ ಹೂಡಿಲ್ಲ. ವಿದೇಶಗಳಲ್ಲಿ ಈ ನಿಯಮದ ಅಡಿಯಲ್ಲಿ ದಾವೆ ಹೂಡುವುದು ಸಾಮಾನ್ಯ ಎಂದು ಅವರು ಹೇಳಿದ್ದಾರೆ.