"ಅಮೆರಿಕಾದಲ್ಲಿ ಪ್ರವಾಹ ಸಂಭವಿಸುವುದಿಲ್ಲವೇ?"
ಪಾಟ್ನಾ: ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಅಭೂತಪೂರ್ವ ಪ್ರವಾಹ ಪರಿಸ್ಥಿತಿಯಿಂದ ಸಾವು ನೋವು ಹಾಗೂ ಆಸ್ತಿಪಾಸ್ತಿ ನಷ್ಟವುಂಟಾಗಿರುವ ಹಿನ್ನೆಲೆಯಲ್ಲಿ ಮಂಗಳವಾರ ನೆರೆ ಪೀಡಿತ ಪ್ರದೇಶಗಳಿಗೆ ತೆರಳಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂತ್ರಸ್ತರ ಆಕ್ರೋಶಕ್ಕೆ ತುತ್ತಾಗಬೇಕಾಯಿತು. ಒಂದು ಹಂತದಲ್ಲಂತೂ ತಮ್ಮ ತಾಳ್ಮೆ ಕಳೆದುಕೊಂಡ ನಿತೀಶ್, ಪ್ರವಾಹ ಪಾಟ್ನಾದಲ್ಲಷ್ಟೇ ಅಲ್ಲ, ದೇಶದ ಇತರೆಡೆ ಹಾಗೂ ಅಮೆರಿಕಾದಲ್ಲೂ ಸಂಭವಿಸಿವೆ ಎಂದು ಹೇಳಿದರು.
ಪ್ರವಾಹ ಪೀಡಿತ ಸ್ಥಳಗಳನ್ನು ಮುಖ್ಯಮಂತ್ರಿ ಅವಲೋಕಿಸುತ್ತಿದ್ದಾಗ ಪತ್ರಕರ್ತರ ಪ್ರಶ್ನೆಗಳ ಸುರಿಮಳೆಗೆ ಸಿಟ್ಟುಗೊಂಡ ನಿತೀಶ್ "ದೇಶದ ಹಾಗೂ ಜಗತ್ತಿನ ಎಷ್ಟು ಭಾಗಗಳಲ್ಲಿ ಪ್ರವಾಹವುಂಟಾಗಿದೆ ಎಂದು ನಾನು ಕೇಳುತ್ತಿದ್ದೇನೆ. ಪಾಟ್ನಾದ ಕೆಲವು ಕಡೆಗಳಲ್ಲಿ ಪ್ರವಾಹ ಉಂಟಾಗಿರುವುದು ನಮಗಿರುವ ಏಕೈಕ ಸಮಸ್ಯೆಯೇ? ಅಮೆರಿಕಾದಲ್ಲೇನಾಯಿತು ?,'' ಎಂದು ಪ್ರಶ್ನಿಸಿದರು.
ನೆರೆ ಪರಿಹಾರ ಸಾಮಗ್ರಿಗಳ ಗೋದಾಮು ಆಗಿ ಪರಿವರ್ತಿಸಲ್ಪಟ್ಟ ಶ್ರೀ ಕೃಷ್ಣ ಸ್ಮಾರಕ ಸಭಾಂಗಣಕ್ಕೂ ಮುಖ್ಯಮಂತ್ರಿ ತೆರಳಿ ಪರಿಶೀಲಿಸಿದರು.
ಪ್ರವಾಹದ ನೀರನ್ನು ಹೊರ ಹಾಕಲು ಅಹೋರಾತ್ರಿ ಕೆಲಸ ಮಾಡುತ್ತಿರುವ ಸಂಪುಗಳ ಕಾರ್ಯನಿರ್ವಹಣೆಯನ್ನು ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಪರಿಶೀಲಿಸಿದರು.