​ದೇಶಾದ್ಯಂತ ಪ್ರವಾಹ ಇದ್ದರೂ ಶೇ 23 ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ !

Update: 2019-10-03 03:49 GMT

ಹೊಸದಿಲ್ಲಿ: ಈ ಬಾರಿಯ ಮುಂಗಾರು ಅವಧಿಯಲ್ಲಿ 25 ವರ್ಷಗಳಲ್ಲೇ ಗರಿಷ್ಠ ಮಳೆ ದಾಖಲಾಗಿದ್ದು, ಹಲವು ರಾಜ್ಯಗಳಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಆದರೆ ದೇಶದ 154 ಜಿಲ್ಲೆಗಳಲ್ಲಿ ಅಂದರೆ ಪ್ರತಿ ಐದು ಜಿಲ್ಲೆಗಳ ಪೈಕಿ ಒಂದು ಜಿಲ್ಲೆಯಲ್ಲಿ ಅನಾವೃಷ್ಟಿಯಿಂದಾಗಿ ಬರ ಪರಿಸ್ಥಿತಿ ಎದುರಾಗಿದೆ.

ದೇಶದ 675 ಜಿಲ್ಲೆಗಳ ಪೈಕಿ ಶೇಕಡ 23 ಜಿಲ್ಲೆಗಳಲ್ಲಿ ಅಂದರೆ 154 ಜಿಲ್ಲೆಗಳಲ್ಲಿ ಮಳೆಯ ತೀವ್ರ ಅಭಾವ ಇದೆ ಎಂದು ಹವಾಮಾನ ಇಲಾಖೆ ಅಂಕಿ ಅಂಶಗಳು ಹೇಳುತ್ತವೆ. ಈ ಪೈಕಿ 12 ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳು ಉತ್ತರ, ಪೂರ್ವ ಹಾಗೂ ಈಶಾನ್ಯ ಭಾರತಕ್ಕೆ ಸೇರಿದವು.

ವಾಡಿಕೆ ಮಳೆಗಿಂತ ಶೇಕಡ 20 ರಿಂದ 59ರಷ್ಟು ಕಡಿಮೆ ಮಳೆಯಾದ ಜಿಲ್ಲೆಗಳನ್ನು ಅತಿವೃಷ್ಟಿಪೀಡಿತ ಜಿಲ್ಲೆಗಳೆಂದು ಹವಾಮಾನ ಇಲಾಖೆ ನಿರ್ಧರಿಸುತ್ತದೆ. ಶೇಕಡ 60ಕ್ಕಿಂತ ಕಡಿಮೆ ಮಳೆ ಬಿದ್ದಲ್ಲಿ ಅದನ್ನು ತೀವ್ರ ಅಭಾವ ವರ್ಗಕ್ಕೆ ಸೇರಿಸಲಾಗುತ್ತದೆ.

ಹರ್ಯಾಣದಲ್ಲಿ ಗರಿಷ್ಠ ಅಂದರೆ 21 ಜಿಲ್ಲೆಗಳ ಪೈಕಿ 19 ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಇದ್ದು, ಮೂರು ಜಿಲ್ಲೆಗಳಲ್ಲಿ ತೀವ್ರ ಅಭಾವ ತಲೆದೋರಿದೆ. ಹರ್ಯಾಣದಲ್ಲಿ ಒಟ್ಟಾರೆ ಶೇಕಡ 42ರಷ್ಟು ಮಳೆ ಅಭಾವ ಇದೆ. ಶೇಕಡ 56ರಷ್ಟು ಮಳೆ ಅಭಾವ ಇರುವ ಮಣಿಪುರವನ್ನು ಹೊರತುಪಡಿಸಿದರೆ ಹರ್ಯಾಣ ದೇಶದಲ್ಲೇ ಕನಿಷ್ಠ ಮಳೆ ಬಿದ್ದ ಪ್ರದೇಶ. ದೆಹಲಿಯ ಆರು ಜಿಲ್ಲೆಗಳ ಪೈಕಿ ಐದು ಜಿಲ್ಲೆಗಳಲ್ಲಿ ಮಳೆ ಅಭಾವ ಇದೆ.

ಮಳೆ ಅಭಾವ ಇರುವ ಮೂರನೇ ಒಂದರಷ್ಟು ಜಿಲ್ಲೆಗಳು ಅಂದರೆ 52 ಜಿಲ್ಲೆಗಳು ಅತ್ಯಧಿಕ ಕೃಷಿ ಉತ್ಪತ್ತಿ ಇರುವ ಪಂಜಾಬ್, ಹರ್ಯಾಣ, ಪಶ್ಚಿಮ ಉತ್ತರ ಪ್ರದೇಶ ಹಾಗೂ ದೆಹಲಿಗೆ ಸೇರಿದ ಜಿಲ್ಲೆಗಳು. ಈ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಕೂಡಾ ತೀವ್ರವಾಗಿ ಕುಸಿದಿದ್ದು, ಮತ್ತೆ ಕಡಿಮೆ ಮಳೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ದೇಶಾದ್ಯಂತ ಶೇಕಡ 10ರಷ್ಟು ಅಧಿಕ ಮಳೆಯಾಗಿದ್ದರೂ, ಈ ಜಿಲ್ಲೆಗಳಲ್ಲಿ ಅಭಾವ ಪರಿಸ್ಥಿತಿ ಇರುವುದು ಅಚ್ಚರಿಯೇನೂ ಅಲ್ಲ ಎಂದು ತಜ್ಞರು ಹೇಳುತ್ತಾರೆ. "ವಾಡಿಕೆಯಂತೆ ಮಳೆ ಬಿದ್ದಾಗಲೂ ದೇಶದ ಶೇಕಡ 30ರಷ್ಟು ಜಿಲ್ಲೆಗಳಲ್ಲಿ ಮಳೆ ಅಭಾವ ಇರುತ್ತದೆ. ಈ ಬಾರಿ ಶೇಕಡ 23ರಷ್ಟು ಜಿಲ್ಲೆಗಳಲ್ಲಷ್ಟೇ ಅಭಾವ ಇದೆ. ಭಾರತದಂಥ ದೊಡ್ಡ ದೇಶದಲ್ಲಿ ಇಂಥ ವ್ಯತ್ಯಯ ಸಾಮಾನ್ಯ" ಎಂದು ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ ಮಹೋಪಾತ್ರ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News