ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಕೊಲೆ
ಮುದ್ದೇಬಿಹಾಳ, ಅ.13: ವ್ಯಕ್ತಿಯೊಬ್ಬರನ್ನು ಇಬ್ಬರು ಯುವಕರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಹಡಲಗೇರಿ ಗ್ರಾಮದಲ್ಲಿ ರವಿವಾರ ಸಂಜೆ ನಡೆದಿದೆ.
ಅದೇ ಗ್ರಾಮದಲ್ಲಿ ನೇಕಾರಿಕೆ ಮಾಡುತ್ತಿದ್ದ ತಮ್ಮಣ್ಣ ಸಂಗಣ್ಣ ಮೋರಕೆ (48) ಕೊಲೆಯಾದ ವ್ಯಕ್ತಿ. ಕೊಲೆ ಮಾಡಿದ್ದಾರೆನ್ನಲಾದ ಯುವಕರ ಹೆಸರು ತಕ್ಷಣಕ್ಕೆ ತಿಳಿದುಬಂದಿಲ್ಲ. ಆದರೆ ಕೊಲೆಯಾದ ತಮ್ಮಣ್ಣ ಗ್ರಾಮದ ಹಾಲು ಮಾರುವ ಮಹಿಳೆಯೊಬ್ಬಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರೆನ್ನಲಾಗಿದ್ದು, ಆಕೆಯ ಮಗ ಮತ್ತು ಮಗನ ಸ್ನೇಹಿತ ಸೇರಿ ಈ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ತಮ್ಮಣ್ಣರ ಶವವನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಸ್ಥಳಕ್ಕೆ ಸಿಪಿಐ ಆನಂದ ವಾಗ್ಮೋರೆ, ಪಿಎಸೈ ಮಲ್ಲಪ್ಪ ಮಡ್ಡಿ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಕಾನೂನು ಕ್ರಮ ಕೈಕೊಂಡಿದ್ದಾರೆ. ಕೊಲೆಗೀಡಾದವನ ಪತ್ನಿಯಿಂದ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಕೊಳ್ಳಲಾಗುತ್ತದೆ ಎಂದು ಸಿಪಿಐ ಆನಂದ ವಾಗ್ಮೋರೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ತಮ್ಮಣ್ಣ ಸಂಜೆ 6 ಗಂಟೆ ಸುಮಾರಿಗೆ ತನ್ನ ಹೊಲದಿಂದ ಮನೆಗೆ ಬರುತ್ತಿದ್ದಾಗ ಇಬ್ಬರು ಯುವಕರು ತಮ್ಮಣ್ಣ ಜೊತೆ ಮಾತಿನ ಚಕಮಕಿ ನಡೆಸಿದ್ದು, ಈ ವೇಳೆ ಯುವಕನೊಬ್ಬ ಕೈಯಲ್ಲಿದ್ದ ಚೂರಿಯಿಂದ ತಮ್ಮಣ್ಣರಿಗೆ ಇರಿದಿದ್ದಾನೆ. ತೀವ್ರ ಗಾಯಗೊಂಡ ತಮ್ಮಣ್ಣ ನೆಲಕ್ಕೆ ಬಿದ್ದು ರಕ್ತದ ಮಡುವಿನಲ್ಲಿ ಒದ್ದಾಡುತ್ತಿರುವುದನ್ನು ಕಂಡ ಅಕ್ಕಪಕ್ಕದ ಜನರು ತಮ್ಮಣ್ಣರನ್ನು ಸರ್ಕಾರಿ ಆಸ್ಪತ್ರೆಗೆ ತಂದು ದಾಖಲಿಸಿದ್ದು, ಆದರೆ ಅಷ್ಟೊತ್ತಿಗಾಗಲೇ ತಮ್ಮಣ್ಣ ಸಾವನ್ನಪ್ಪಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.
ತಮ್ಮಣ್ಣ ಗ್ರಾಮದಲ್ಲಿ ಹಾಲು ಮಾರುವ ಮಹಿಳೆಯೊಬ್ಬಳೊಂದಿಗೆ ಬಹಳ ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದ್ದು, ಇದೇ ಕಾರಣಕ್ಕೆ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.