ರೇಶ್ಮೆ ಬೆಳೆಗಾರರಿಗೆ ಸರಕಾರ ಸಹಾಯ ನೀಡಲಿ: ಎಸ್ಡಿಪಿಐ
ಬೆಂಗಳೂರು, ಅ.14: ರಾಜ್ಯದ ರೇಶ್ಮೆ ಬಟ್ಟೆಗಳು ದೇಶದಾದ್ಯಂತ ಪ್ರಸಿದ್ಧಿ ಪಡೆದಿದೆಯಾದರೂ ರಾಜ್ಯದ ರೇಶ್ಮೆ ಬೆಳೆಗಾರರ ಸಮಸ್ಯೆಗಳನ್ನು ಮಾತ್ರ ಕೇಳುವವರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಎಸ್ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಆಕ್ರೋಶ ವ್ಯಕ್ತಪಡಿಸಿದರು.
ಕೋಲಾರ, ರಾಮನಗರ, ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ರೇಶ್ಮೆಯನ್ನು ಬಹು ವಿಧದಲ್ಲಿ ಕಸುಬಾಗಿ ಹೊಂದಿರುವ ಸಾವಿರಾರು ಕುಟುಂಬಗಳು ಈಗ ಸಂಕಷ್ಟದ ಹಾದಿಯಲ್ಲಿವೆ. ರೇಶ್ಮೆ ಬೆಳೆಗಾರರ ಹಾಗೂ ರೇಶ್ಮೆ ಕೈಗಾರಿಕೆದಾರರಿಗೆ ರಾಜ್ಯ ಸರಕಾರ ತಕ್ಷಣ ನೆರವು ಮತ್ತು ಪ್ರೋತ್ಸಾಹ ಪ್ಯಾಕೇಜ್ಗಳನ್ನು ಒದಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಚೀನಾ ದೇಶದಿಂದ ಅತ್ಯಂತ ಸ್ಪರ್ಧಾತ್ಮಕ ದರದಲ್ಲಿ ಆಮದುಗೊಳ್ಳುತ್ತಿರುವ ರೇಶ್ಮೆ ಬಟ್ಟೆಗಳು ರಾಜ್ಯದ ರೇಶ್ಮೆ ಮಾರುಕಟ್ಟೆಯನ್ನು ತಲ್ಲಣಗೊಳಿಸಿದೆ. ಚೀನಾದ ಬಂಡವಾಳಶಾಹಿ ಕಂಪೆನಿಗಳು ರಾಜ್ಯದಲ್ಲಿ ಬಡ ರೈತರಿಗೆ ಬಂಡವಾಳವನ್ನು ಒಪ್ಪಂದದ ಆಧಾರದಲ್ಲಿ ನೀಡಿ ರೇಶ್ಮೆ ಸ್ಥಾವರಗಳನ್ನು ಸ್ಥಾಪಿಸುತ್ತಿವೆ ಎಂದು ಅವರು ಹೇಳಿದರು.
ಇದರಿಂದ ಆ ಸ್ಥಾವರಗಳಿಗೆ ಒಳಪಟ್ಟ ರೈತರು ಕಡಿಮೆ ಬೆಲೆಯಲ್ಲಿ ರೇಶ್ಮೆಯನ್ನು ನೀಡಬೇಕಾಗಿ ಬರುವುದರಿಂದ ಉಳಿದ ರೈತರು ಸೂಕ್ತ ಬೆಲೆಯಿಲ್ಲದೆ ರೇಶ್ಮೆ ಬೆಳೆಗಾರಿಕೆಯನ್ನೇ ಕೈ ಬಿಡುವಂತಹ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಬಂಡವಾಳಶಾಹಿಗಳು ಬೆಳೆಗಾರರನ್ನು ಇನ್ನಿಲ್ಲದಂತೆ ಶೋಷಣೆಗೆ ಒಳಪಡಿಸುತ್ತಿದ್ದಾರೆ.
ರಾಜ್ಯದ ಆರ್ಥಿಕತೆಯಲ್ಲಿ ಒಂದಷ್ಟು ಕೊಡುಗೆಯನ್ನು ನೀಡಿದ ಹಾಗೂ ಸಾವಿರಾರು ಕುಟುಂಬಗಳಿಗೆ ಆಸರೆಯಾಗಿ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ರೇಶ್ಮೆ ಬೆಳೆಯನ್ನು ಪುನಶ್ಚೇತನಗೊಳಿಸುವ ಸಲುವಾಗಿ ರಾಜ್ಯ ಸರಕಾರ ಮಾರುಕಟ್ಟೆ ನಿಯಂತ್ರಣ, ಸಬ್ಸಿಡಿ, ಪ್ರೋತ್ಸಾಹ ಪ್ಯಾಕೇಜ್, ರೇಶ್ಮೆ ಬೆಳೆಗಾರರ ಮಕ್ಕಳಿಗೆ ಶೈಕ್ಷಣಿಕ ಸಹಾಯ, ಬಂಡವಾಳಶಾಹಿಗಳಿಂದ ನಡೆಯುವ ಶೋಷಣೆಯನ್ನು ತಡೆಯುವುದು ಇತ್ಯಾದಿಗಳನ್ನು ವ್ಯವಸ್ಥಿತವಾಗಿ ಜಾರಿಗೊಳಿಸಬೇಕೆಂದು ಇಲ್ಯಾಸ್ ಮುಹಮದ್ ಸರಕಾರವನ್ನು ಒತ್ತಾಯಿಸಿದ್ದಾರೆ.