ದೀಪಾವಳಿ ಬಳಿಕ ದಿಲ್ಲಿ, ನೋಯ್ಡಾದಲ್ಲಿ ವಾಯು ಗುಣಮಟ್ಟ ತೀವ್ರ ಇಳಿಕೆ
ಹೊಸದಿಲ್ಲಿ, ಅ. 28: ದೀಪಾವಳಿ ಆಚರಣೆ ಬಳಿಕ ದಿಲ್ಲಿ ಹಾಗೂ ನೋಯ್ಡಾದಲ್ಲಿ ವಾಯು ಗುಮಟ್ಟ ತುಂಬಾ ಕೆಳ ಮಟ್ಟಕ್ಕೆ ಇಳಿದಿದೆ. ಒಟ್ಟು ವಾಯು ಗುಣಮಟ್ಟ ಸೂಚ್ಯಂಕ ದಿಲ್ಲಿಯಲ್ಲಿ 306 ಹಾಗೂ ನೋಯ್ಡಾದಲ್ಲಿ 356 ದಾಖಲಾಗಿದೆ. ದೀಪಾವಳಿ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸುತ್ತಿರುವುದು ಹಾಗೂ ನೆರೆಯ ರಾಜ್ಯಗಳಲ್ಲಿ ಬೆಳೆ ತ್ಯಾಜ್ಯ ದಹನ ಮಾಡುತ್ತಿರುವುದರಿಂದ ದಿಲ್ಲಿಯಲ್ಲಿ ವಾಯು ಗುಣಮಟ್ಟ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ದೀಪಾವಳಿ ಬಳಿಕ ಗುರುಗಾಂವ್ನಲ್ಲಿ ವಾಯು ಗುಣಮಟ್ಟದ ಸೂಚ್ಯಂಕ 279ಕ್ಕೆ ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ವಾಯು ಗುಣಮಟ್ಟ ಇನ್ನಷ್ಟು ಇಳಿಕೆಯಾಗುವ ನಿರೀಕ್ಷೆ ಇದೆ. ದೀಪಾವಳಿ ಕಾರಣದಿಂದ ವಾಯು ಗುಣಮಟ್ಟ ಸೂಚ್ಯಂಕ ಸುಮಾರು 324ಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಸಿಸ್ಟಂ ಆಫ್ ಏರ್ ಕ್ವಾಲಿಟಿ ಆ್ಯಂಡ್ ಫೋರ್ಕಾಸ್ಟಿಂಗ್ ಆ್ಯಂಡ್ ರಿಸರ್ಚ್ (ಎಸ್ಎಫ್ಎಆರ್) ಶನಿವಾರ ತಿಳಿಸಿತ್ತು. ಪಂಜಾಬ್ ಹಾಗೂ ಹರ್ಯಾಣಗಳಲ್ಲಿ ಬೆಳೆ ತ್ಯಾಜ್ಯ ದಹನ ದಿಲ್ಲಿಯಲ್ಲಿ ವಾಯು ಗುಣಮಟ್ಟ ಇಳಿಕೆಯಾಗಲು ಪ್ರಮುಖ ಕಾರಣ. ಈ ವರ್ಷ ಹುಲ್ಲು ದಹನ ಹೆಚ್ಚಾಗಿದೆ ಎಂದು ಪಂಜಾಬ್ ರಿಮೋಟ್ ಸೆನ್ಸಿಂಗ್ ಸೆಂಟರ್ (ಪಿಆರ್ಎಸ್ಸಿ) ತಿಳಿಸಿದೆ. ವಾಯು ಗುಣಮಟ್ಟ ಇಳಿಕೆ ತಡೆಗಟ್ಟಲು ಅರವಿಂದ ಕೇಜ್ರಿವಾಲ್ ಅವರ ಸರಕಾರ ನವೆಂಬರ್ 4 ರಿಂದ 15ರ ವರೆಗೆ ಸಮ-ಬೆಸ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದೆ.