ಲೋಕಪಾಲಕ್ಕೆ ಲಾಂಛನ, ಧ್ಯೇಯವಾಕ್ಯ ಆಯ್ಕೆ
ಹೊಸದಿಲ್ಲಿ, ನ.26: ಲೋಕಪಾಲಕ್ಕೆ ಲಾಂಛನ ಮತ್ತು ಧ್ಯೇಯವಾಕ್ಯವನ್ನು ಆಯ್ಕೆ ಮಾಡಲಾಗಿದೆ ಎಂದು ಸಿಬ್ಬಂದಿ ಸಚಿವಾಲಯದ ಹೇಳಿಕೆ ತಿಳಿಸಿದೆ.
ಮೂರು ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತರಪ್ರದೇಶದ ಅಲಹಾಬಾದ್ನ ಪ್ರಶಾಂತ್ ಮಿಶ್ರ ಅವರ ಲಾಂಛನ ವಿನ್ಯಾಸ ಆಯ್ಕೆಯಾಗಿದೆ. ಲೋಕಪಾಲ ಪದದ ವಾಚ್ಯಾರ್ಥವಾದ ಲೋಕ (ಜನತೆ), ಪಾಲ್ (ರಕ್ಷಕ) ಅಂದರೆ ಜನತೆಯ ರಕ್ಷಕ ಎಂಬ ಅರ್ಥ ಕೊಡುವ ವಿನ್ಯಾಸ ಇದಾಗಿದೆ . ನ್ಯಾಯದ ಪರಿಪಾಲನೆಯ ಮೂಲಕ ಲೋಕಪಾಲರು ಯಾವರೀತಿ ಜನರ ಹಿತಚಿಂತನೆ ಮತ್ತು ರಕ್ಷಣೆ ಮಾಡುತ್ತದೆ ಎಂಬುದನ್ನು ಸಾಂಕೇತಿಕವಾಗಿ ಈ ಲಾಂಛನ ತೋರಿಸುತ್ತದೆ.
ಲಾಂಛನದ ಹಿನ್ನೆಲೆಯಲ್ಲಿರುವ ತ್ರಿವರ್ಣ , ನ್ಯಾಯಾಧೀಶರ ಪೀಠ, ಜನತೆ(ಮೂವರು ಮನುಷ್ಯರ ಆಕೃತಿ), ಜಾಗೃತಿ(ಅಶೋಕಚಕ್ರ), ಕಾನೂನು( ಕೇಸರಿ ಬಣ್ಣದಲ್ಲಿರುವ ಪುಸ್ತಕದ ಆಕೃತಿ) ಮತ್ತು ನ್ಯಾಯಾಂಗ( ತ್ರಿವರ್ಣದಲ್ಲಿರುವ ಎರಡು ಕೈಗಳು) ಲೋಕಪಾಲರ ರಾಷ್ಟ್ರೀಯ ಸಾರವನ್ನು ಪ್ರತಿನಿಧಿಸುತ್ತವೆ ಎಂದು ಪ್ರಶಾಂತ್ ಮಿಶ್ರ ಹೇಳಿದ್ದಾರೆ.
ಲೋಕಪಾಲಕ್ಕೆ ಲಾಂಛನ ಮತ್ತು ಧ್ಯೇಯವಾಕ್ಯ ಆಯ್ಕೆ ಮಾಡಲು ದೇಶದಾದ್ಯಂತ ಮುಕ್ತ ಸ್ಪರ್ಧೆ ಆಯೋಜಿಸಿದ್ದು ಲಾಂಛನ ಸೂಚಿಸಿ 2,236 ಮತ್ತು ಧ್ಯೇಯವಾಕ್ಯ ಸೂಚಿಸಿ 4,705 ಅರ್ಜಿಗಳು ಬಂದಿದ್ದವು. ಇದರಲ್ಲಿ ಲಾಂಛನದ ವಿನ್ಯಾಸವನ್ನು ಅರ್ಜಿಗಳಿಂದ ಆಯ್ಕೆ ಮಾಡಲಾಗಿದೆ. ಆದರೆ ಧ್ಯೇಯವಾಕ್ಯ ಸೂಚಿಸಿದ ಯಾವುದೇ ಅರ್ಜಿ ಸೂಕ್ತವಾಗಿರದ ಕಾರಣ ಲೋಕಪಾಲ ಕಚೇರಿಯೇ ಸ್ವತಃ ಧ್ಯೇಯವಾಕ್ಯ ಆಯ್ಕೆ ಮಾಡಿಕೊಂಡಿದೆ ಎಂದು ಹೇಳಿಕೆ ತಿಳಿಸಿದೆ.