ಎನ್ಆರ್ ಸಿಗೆ ಬಿಜೆಡಿ ಬೆಂಬಲವಿಲ್ಲ: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್
Update: 2019-12-19 09:46 GMT
ಭುಬನೇಶ್ವರ್: ಪೌರತ್ವ ತಿದ್ದುಪಡಿ ಕಾಯಿದೆಯನ್ನು ಸಂಸತ್ತಿನಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಬಿಜು ಜನತಾ ದಳ ಬೆಂಬಲಿಸಿದ್ದರೂ ಇದೀಗ ಒಡಿಶಾದಲ್ಲಿ ಎನ್ಆರ್ ಸಿ ಜಾರಿಗೊಳಿಸಲು ಬಿಜು ಜನತಾದಳ ಬೆಂಬಲ ನೀಡುವುದಿಲ್ಲ ಎಂದು ಪಟ್ನಾಯಕ್ ಹೇಳಿದ್ದಾರೆ.
ರಾಜಧಾನಿ ದಿಲ್ಲಿಗೆ ನಾಲ್ಕು ದಿನಗಳ ಭೇಟಿಗಾಗಿ ಹೊರಟಿರುವ ಪಟ್ನಾಯಕ್ ತಮ್ಮ ಪಕ್ಷದ ರಾಜ್ಯಸಭಾ ಹಾಗೂ ಲೋಕಸಭಾ ಸದಸ್ಯರು ತಾವು ಎನ್ಆರ್ ಸಿ ಬೆಂಬಲಿಸುವುದಿಲ್ಲ ಎಂದು ಈಗಾಗಲೇ ಸ್ಪಷ್ಟ ಪಡಿಸಿದ್ದಾರೆ ಎಂದು ತಿಳಿಸಿದರು.
ಹೊಸ ಪೌರತ್ವ ತಿದ್ದುಪಡಿ ಕಾಯಿದೆ ಭಾರತೀಯ ಮುಸ್ಲಿಮರನ್ನು ಬಾಧಿಸುವುದಿಲ್ಲ ಎಂದು ಹೇಳಿದ ಅವರು, ಕಾಯಿದೆಯ ವಿರುದ್ಧ ಒಡಿಶಾದಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಂಘಟನೆಗಳಿಗೆ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು.