ಕೋವಿಡ್-19 ವಿರುದ್ಧ ಹೋರಾಟವು ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಅತ್ಯುತ್ತಮ ನಿದರ್ಶನ: ಪ್ರಧಾನಿ ಮೋದಿ

Update: 2020-06-16 15:50 GMT

ಹೊಸದಿಲ್ಲಿ,ಜೂ.16: ಕೊರೋನ ವೈರಸ್ ವಿರುದ್ಧ ಒಗ್ಗೂಡಿ ಹೋರಾಡುವ ಮತ್ತು ಸಮನ್ವಯದಿಂದ ಶ್ರಮಿಸುವ ಮೂಲಕ ಕೇಂದ್ರ ಮತ್ತು ರಾಜ್ಯಗಳು ಸಹಕಾರಿ ಒಕ್ಕೂಟ ವ್ಯವಸ್ಥೆಯ ಅತ್ಯುತ್ತಮ ಉದಾಹರಣೆಯನ್ನು ತೋರಿಸಿವೆ ಎಂದು ಮಂಗಳವಾರ ಇಲ್ಲಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು,ಉಪರಾಜ್ಯಪಾಲರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಎರಡು ದಿನಗಳ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಅನ್‌ಲಾಕ್-1 ಜೂನ್ 30ರಂದು ಅಂತ್ಯಗೊಳ್ಳಲಿದ್ದು,ಮುಖ್ಯಮಂತ್ರಿಗಳಿಂದ ಮರುಮಾಹಿತಿಗಳ ಆಧಾರದಲ್ಲಿ ಮೋದಿಯವರು ಮುಂದಿನ ನೀತಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ. ‘ಭವಿಷ್ಯದಲ್ಲಿ ಎಂದಾದರೂ ಕೊರೋನ ವೈರಸ್ ವಿರುದ್ಧ ಭಾರತದ ಹೋರಾಟವು ವಿಶ್ಲೇಷಿಸಲ್ಪಟ್ಟಾಗ ಪ್ರಸಕ್ತ ಸಮಯವು ನಾವು ಹೇಗೆ ಒಂದಾಗಿ ಶ್ರಮಿಸಿದ್ದೆವು ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಸ್ಮರಿಸಲ್ಪಡಲಿದೆ, ಖಂಡಿತವಾಗಿಯೂ ಇದು ಸಹಕಾರಿ ಒಕ್ಕೂಟ ವ್ಯವಸ್ಥೆಯ ಅತ್ಯುತ್ತಮ ನಿದರ್ಶನವಾಗಿದೆ ’ಎಂದ ಮೋದಿ, ಭಾರತವು ಲಾಕ್‌ಡೌನ್ ಅನ್ನು ಜಾರಿಗೊಳಿಸಿದ ರೀತಿ ಮತ್ತು ಈ ಸಮಯದಲ್ಲಿ ಭಾರತೀಯರು ಪ್ರದರ್ಶಿಸಿದ ಶಿಸ್ತಿನ ಬಗ್ಗೆ ವಿಶ್ವಾದ್ಯಂತ ಖ್ಯಾತ ತಜ್ಞರು ವಿವರವಾಗಿ ಚರ್ಚಿಸುತ್ತಿದ್ದಾರೆ. ಭಾರತದಲ್ಲಿ ಕೋವಿಡ್-19 ರೋಗಿಗಳ ಚೇತರಿಕೆಯ ಪ್ರಮಾಣ ಶೇ.50ಕ್ಕಿಂತ ಹೆಚ್ಚಾಗಿದೆ. ಕೊರೋನ ವೈರಸ್ ಸೋಂಕು ಪೀಡಿತರಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ ದೇಶಗಳ ಪೈಕಿ ಭಾರತವೂ ಒಂದಾಗಿದೆ ಎಂದರು.

ದೇಶವು ಕಳೆದ ಕೆಲವು ದಿನಗಳಲ್ಲಿ ಹಂತಹಂತವಾಗಿ ಲಾಕ್‌ಡೌನ್‌ನಿಂದ ಮುಕ್ತಗೊಂಡಿದೆ ಮತ್ತು ಆರ್ಥಿಕ ಸೂಚಕಗಳು ಭಾರತವು ಸಹಜತೆಯತ್ತ ಸಾಗುತ್ತಿರುವ ಎಲ್ಲ ಲಕ್ಷಣಗಳನ್ನು ತೋರಿಸುತ್ತಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News